- ಭ್ರಷ್ಟಾಚಾರ ರಹಿತ ರಸ್ತೆ ಕಾಮಗಾರಿ – ಮಠಂದೂರು
ನಿಡ್ಪಳ್ಳಿ: ಅರ್ಜಿ ಸ್ವೀಕರಿಸದೆ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ ಸರಕಾರವಿದ್ದರೆ ಅದು ನರೆಂದ್ರ ಮೋದಿ ಮತ್ತು ಬೊಮ್ಮಾಯಿ ಸರಕಾರ’ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬೆಟ್ಟಂಪಾಡಿ ಗ್ರಾಮದ ಕಕ್ಕೂರು – ಆನಡ್ಕ – ನಿಡ್ಪಳ್ಳಿಯ ಕರ್ನಪ್ಪಾಡಿ ಸಂಪರ್ಕಿಸುವ ರೂ. 7.5 ಕೋಟಿ ಅನುದಾನದ 2019-20 ನೇ ಸಾಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆಯನ್ನು ಬೇರಿಕೆಯಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಈ ದೇಶದಲ್ಲಿ 75 ವರ್ಷಗಳ ಬಳಿಕ ವಾಜಪೇಯಿ ಮತ್ತು ಮೋದಿ ಸರಕಾರದಲ್ಲಿ ಭಾರೀ ಪರಿವರ್ತನೆ ಬಂದಿದೆ. ಗ್ರಾಮೋತ್ಹಾನದ ಪರಿಕಲ್ಪನೆಯಲ್ಲಿ ಹಳ್ಳಿ ಹಳ್ಳಿಯ ಬದಲಾವಣೆಯಿಂದ ದೇಶದ ಪರಿವರ್ತನೆ ಕಾಣಲಾಗುತ್ತಿದೆ. ಭ್ರಷ್ಟಾಚಾರ ರಹಿತವಾಗಿ ಸಂಪೂರ್ಣ ಯೋಜನೆಗಳು ಏಜೆಂಟ್ ಗಳ ಹಸ್ತಕ್ಷೇಪವಿಲ್ಲದೇ, ಅರ್ಜಿ ಸ್ವೀಕರಿಸದೆ ನೇರ ಫಲಾನುಭವಿಗಳಿಗೆ ಸೇರುವಂತಹ ಯೋಜನೆ ತಂದಿದ್ದರೆ ಅದು ಮೋದಿ ಸರಕಾರದಿಂದ ಮಾತ್ರ ಸಾಧ್ಯವಾಗಿದೆ. ನುಡಿದಂತೆ ನಡೆದಿರುವ ಸರ್ಕಾರದ ಜನಪರ ಯೋಜನೆಗಳು ಕಿಂಚಿತ್ತು ಲೋಪವಿಲ್ಲದೇ ತಲುಪುತ್ತಿದೆ ಎಂದು ಎದೆ ತಟ್ಟಿ ಹೇಳಬಲ್ಲೆ’ ಎಂದು ಹೇಳಿದರು. ಕೇಂದ್ರ ಸರಕಾರ ದ.ಕ. ಜಿಲ್ಲೆಯ ಅಭಿವೃದ್ಧಿ ಗೆ 20,000 ಕೋಟಿ ರೂ. ನೀಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದೆ. ಪ್ರತೀ ಪಂಚಾಯತ್ಗಳಿಗೂ ಲಕ್ಷ ಕೋಟಿ ಅನುದಾನಗಳನ್ನು ನೀಡಲಾಗುತ್ತಿದ್ದು, ಪ್ರತೀ ಪಂಚಾಯತ್ ಸದಸ್ಯನಿಗೂ ಗೌರವ ತಂದುಕೊಟ್ಟಿದೆ. ಬಡವರ ಕಲ್ಯಾಣ – ಗ್ರಾಮೋತ್ಹಾನದ ಪರಿಕಲ್ಪನೆಯ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಯೋಜನೆಗಳನ್ನು ಸಾಕಾರಗೊಳಿಸುತ್ತಿವೆ’ ಎಂದರು.
ಕೊರಿಂಗಿಲದಲ್ಲಿ ರಿಬ್ಬನ್ ಕತ್ತರಿಸಿ ರಸ್ತೆ ಉದ್ಘಾಟನೆಗೊಳಿಸಿ ಬಳಿಕ ಬೇರಿಕೆಯಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು ‘ಆಜಾಧಿಕ ಅಮೃತ ಮಹೋತ್ಸವದ ಸವಿನೆನಪಿಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಈ ದೇಶದಲ್ಲಿ ಬಹುದೊಡ್ಡ ಪರಿವರ್ತನೆಯನ್ನು ಹಳ್ಳಿಯ ಮೂಲೆಯಲ್ಲಿರುವ ರೈತನ, ಕೂಲಿಕಾರ್ಮಿಕನ ಮನೆಯಿಂದ ಕಾಣಲಾಗುತ್ತಿದೆ. ಪರಿಶಿಷ್ಟ ಜಾತಿ ಪಂಗಡದ ಜನರಲ್ಲಿ ಸ್ವಾಭಿಮಾನದ ಬದುಕು, ರೈತರಲ್ಲಿ ಆತ್ಮವಿಶ್ವಾಸದ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ. ಖಾನೆ ಬಾಣೆ ಕುಮ್ಕಿ ಹಕ್ಕನ್ನು ಪಡೆದು ಕೃಷಿಕನಾದವನು ಹೆಚ್ಚು ಬೆಳೆ ಬೆಳೆದು ಸ್ವಾಭಿಮಾನದ ಬದುಕು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಬಗ್ಗೆ ಸಂಸದರ ಮುಖೇನ ಪ್ರಯತ್ನ ನಡೆಯುತ್ತಿದೆ’ ಎಂದ ಅವರು ಅನೇಕ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಗೆ ವೇಗ ನೀಡುವ ಪ್ರಯತ್ನ ನಿರತಂರವಾಗಿದೆ. ರಾಜ್ಯಾಧ್ಯಕ್ಷರ ಊರಿನವರಾದ ನಮಗೆ ವಿಶೇಷ ಗೌರವ ಇದೆ.ಹಾಗಾಗಿ ಅನುದಾನವೂ ಒಂದಷ್ಟು ಹೆಚ್ಚು ಬಂದಿದೆ’ ಎಂದರು.
ಸನ್ಮಾನ: ಸಂಸದ ನಳಿನ್ ಕುಮಾರ್, ಶಾಸಕ ಸಂಜೀವ ಮಠಂದೂರು, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಾನಂದ, ಸಹಾಯಕ ಇಂಜಿನಿಯರ್ ಪರಶಿವಮೂರ್ತಿ, ಕಿರಿಯ ಇಂಜಿನಿಯರ್ ಜನಾರ್ದನ್, ಗುತ್ತಿಗೆದಾರ ರಾಧಾಕೃಷ್ಣ ನೈಕ್ ರವರನ್ನು ನಿಡ್ಪಳ್ಳಿ ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಡಿ., ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ., ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಪಸ್ಥಿತರಿದ್ದರು.
ನಿಡ್ಪಳ್ಳಿ ಗ್ರಾ.ಪಂ. ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ನಿಡ್ಪಳ್ಳಿ ಭಾಗದ ಜನತೆಯ ಬಹುವರ್ಷಗಳ ಕನಸು ನನಸಾಗಿಸಿದ ಸಂಸದರನ್ನು ಮತ್ತು ಶಾಸಕರನ್ನು ಅಭಿನಂದಿಸಿದರು. ಮುಂದೆ ಸಂಜೀವಣ್ಣ ಮತ್ತು ನಳಿನ್ ಕುಮಾರ್ ರವರು ಮಂತ್ರಿಯಾಗಿ ಬರಬೇಕೆಂಬುದು ನಮ್ಮೆಲ್ಲರ ಹಾರೈಕೆ ಎಂದರು.
ಕಾರ್ಯಕ್ರಮ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮಂಗಳೂರು ಹಾಗೂ ಬೆಟ್ಟಂಪಾಡಿ ಮತ್ತು ನಿಡ್ಪಳ್ಳಿ ಗ್ರಾಮ ಪಂಚಾಯತ್ ಇವರ ಜಂಟಿ ಸಹಯೋಗದಲ್ಲಿ ನಡೆಯಿತು. ಪ್ರಭಾಕರ ಭಟ್ ಬಂಟಾಜೆ ಪ್ರಾರ್ಥಿಸಿದರು. ಕಿರಿಯ ಇಂಜಿನಿಯರ್ ಜನಾರ್ದನ್ ವಂದಿಸಿದರು.
ನಿಡ್ಪಳ್ಳಿಯ ಬೇರಿಕೆಯಲ್ಲಿ ಚೆಂಡೆ ಮೇಳದೊಂದಿಗೆ ಸಂಸದರು ಮತ್ತು ಶಾಸಕರನ್ನು ಸ್ವಾಗತಿಸಲಾಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರಿಯದರ್ಶಿನಿ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸಹಕರಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ಪಾಣಾಜೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಬೆಟ್ಟಂಪಾಡಿ ಹಾಗೂ ನಿಡ್ಪಳ್ಳಿ ಗ್ರಾ.ಪಂ. ಸದಸ್ಯರು, ತಾಲೂಕು ಪ್ರಮುಖರಾದ ನಿತೀಶ್ ಕುಮಾರ್ ಶಾಂತಿವನ, ಮುಕುಂದ ಬಜತ್ತೂರು, ಆರ್.ಸಿ.ನಾರಾಯಣ್, ಶಂಭು ಭಟ್ ಡಿ., ಜಗನ್ನಾಥ ರೈ ಕೊಮ್ಮಂಡ, ಪ್ರಕಾಶ್ ಬೋರ್ಕರ್, ಪ್ರಕಾಶ್ ರೈ ಬೈಲಾಡಿ, ರಮೇಶ್ ಶೆಟ್ಟಿ ಕೊಮ್ಮಂಡ, ಮೀನಾಕ್ಷಿ ಮಂಜುನಾಥ್, ಮನೋಜ್ ರೈ ಪೇರಾಲ್, ಬಡಗನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಹಾಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಕೊರಿಂಗಿಲದಲ್ಲಿ ಉದ್ಘಾಟನೆ
ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಲ್ಲಿ ರಿಬ್ಬನ್ ಕತ್ತರಿಸಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಬೆಟ್ಟಂಪಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು ತೆಂಗಿನಕಾಯಿ ಒಡೆದು ಮಾತನಾಡಿ ರಸ್ತೆ ಆಗುವಲ್ಲಿನ ಪರಿಶ್ರಮ ಮತ್ತು ಸಂಸದ ಶಾಸಕರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.
ಪುತ್ತೂರು ತಾಲೂಕಿನಲ್ಲಿ ಅತ್ಯಧಿಕ ಸಡಕ್ ಯೋಜನೆ
ಜಿಲ್ಲೆಯಲ್ಲಿ 173 ಕಿ. ಮೀ. ರಸ್ತೆಗೆ ಸಡಕ್ ಅನುದಾನ ಬಂದಿದ್ದು, ಒಟ್ಟು 184 ಕೋಟಿ ರೂ. ಬಂದಿದೆ. ಅದರಲ್ಲಿ ಹೆಚ್ಚು ಮತ್ತು ಸಡಕ್ ರಸ್ತೆಗಳು ಪುತ್ತೂರು ತಾಲೂಕಿನಲ್ಲಿ ಆಗಿದೆ. ಇದರ ಹಿಂದೆ ಭ್ರಷ್ಟಾಚಾರ ರಹಿತ, ನಿಷ್ಕಳಂಕ ಮನಸ್ಸಿನ ಸಂಜೀವ ಮಠಂದೂರುರವರ ಪರಿಶ್ರಮವಿದೆ. ಅವರಿಂದಾಗಿ ಈ ರಸ್ತೆಗೆ ಹಣವು ಸಂಪೂರ್ಣವಾಗಿ ಸದ್ವಿನಿಯೋಗವಾಗಿದೆ’ ಎಂದು ನಳಿನ್ ಹೇಳಿದರು.
ಸಂಜೀವಣ್ಣ ಮಂತ್ರಿಗಿರಿ ಕೇಳಲು ಬಂದಿಲ್ಲ
ನಿಮ್ಮೂರಿನ ಶಾಸಕರಾದ ಸಂಜೀವಣ್ಣ ನನಗೆ ಮಂತ್ರಿಗಿರಿ ಕೊಡಿ ಎಂದು ಕೇಳಲು ಬಂದಿಲ್ಲ. ಅಂಗಾರರಿಗೆ ಮಂತ್ರಿಗಿರಿ ಸಿಕ್ಕಾಗ ನನಗೆ ನಿಗಮವಾದರೂ ಕೊಡಿ ಎಂದು ಕೇಳಲು ಬಂದಿಲ್ಲ. ಆದರೆ ನನ್ನೂರಿಗೆ ರಸ್ತೆ, ಅಣೆಕಟ್ಟು, ಕುಡಿಯುವ ನೀರು, ತಡೆಗೋಡೆಗಳಿಗೆ ಅನುದಾನ ಕೊಡಿ ಎಂದು ಕೇಳಲು ತುಂಬಾ ಸಲ ಬಂದಿದ್ದಾರೆ. ಅವರ ಬೆಂಬಿಡದ ಪ್ರಯತ್ನದ ಫಲವಾಗಿ ನೀವು ಸಡಕ್ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಮಠಂದೂರುರವರನ್ನು ಜನಪ್ರಿಯ ಶಾಸಕ ಎನ್ನುವುದಕ್ಕಿಂತಲೂ ಜನಪರ ಶಾಸಕ ಎನ್ನಬಹುದು ಎಂದು ನಳಿನ್ ಹೇಳಿದರು.