ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ.23ರಂದು ನಡೆಯಿತು. ಸಂಸ್ಥೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳನ್ನು ಮೆರವಣಿಗೆಯ ಮೂಲಕ ಶಾಲಾವರಣಕ್ಕೆ ತಂದು ಆರತಿ ಬೆಳಗಿ, ತಿಲಕ ಹಚ್ಚಿ, ಹೂಮಳೆಗೈಯುವ ಮೂಲಕ ಸ್ವಾಗತಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶೈಕ್ಷಣಿಕ ಅಧಿಕಾರಿ ರವೀಂದ್ರ ಡಿ.ರವರು ಮಾತನಾಡಿ ಶಾಲಾ ಕೆಲಸ ಕಾರ್ಯಗಳಲ್ಲಿ ನಿಮ್ಮ ಶ್ರದ್ಧೆ, ತೊಡಗಿಸಿಕೊಳ್ಳುವ ವೈಖರಿ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಮಾರ್ಗದರ್ಶನ ಪೋಷಕರ ಸಲಹೆಗಳೊಂದಿಗೆ ನಿಮ್ಮ ಪಾಲ್ಗೊಳ್ಳುವಿಕೆ ಬಹುಮುಖ್ಯವಾದುದು. ಸುಂದರ, ಸಮೃದ್ಧ ಶೈಕ್ಷಣಿಕ ವಾತಾವರಣವನ್ನು ಸಂಸ್ಥೆ ನಿಮಗೊದಗಿಸುತ್ತಿದೆ. ಉತ್ತಮವಾಗಿ ಬಳಸಿಕೊಳ್ಳಿ.ಇವತ್ತಿನ ನಿಮ್ಮೀ ಉತ್ಸಾಹ,ಹುರುಪು ವರ್ಷದುದ್ದಕ್ಕೂ ಸದಾ ಹೀಗೇ ಇರಲಿ ಎಂದರು.
ಶಾಲಾ ಸಂಚಾಲಕರಾದ ಪ್ರಹ್ಲಾದ್ ಜೆ. ಶೆಟ್ಟಿರವರು ಮಾತನಾಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಅಡಿಪಾಯ ಒದಗಿಸಲು ಸಂಸ್ಥೆ ಸದಾ ಸನ್ನದ್ಧವಾಗಿದೆ. ಸಂಪೂರ್ಣವಾಗಿ ಇದರ ಪ್ರಯೊಜನ ಪಡೆದುಕೊಂಡು ನಿಮ್ಮ ಯಶಸ್ಸಿಗೆ ಪಣತೊಡಿ ಎಂದರು.
ಶಾಲಾ ಟ್ರಸ್ಟಿ ಪುಷ್ಪರಾಜ್ ಹೆಗ್ಡೆ ಮಾತನಾಡಿ ಉತ್ತಮ ಫಲಿತಾಂಶ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ. ನೂತನ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಸುಸೂತ್ರವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕ ವರ್ಗದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕಿ ಮೋಹಿನಿ ರೈ ವಂದಿಸಿದರು. ಶಿಕ್ಷಕಿಯರಾದ ಲೀಲಾ ಹಾಗೂ ಮಂಜುಳಾ ಎಚ್.ಗೌಡ ಕಾರ್ಯಕ್ರಮ ನಿರೂಪಿಸಿದರು. ಸನಿಹಾ ಮತ್ತು ಬಳಗದವರು ಪ್ರಾರ್ಥಿಸಿದರು.