ಪುತ್ತೂರು: ಬಂಟ್ವಾಳ ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ, ಅಕ್ರಮವಾಗಿ ಗಾಂಜಾ ಹೊಂದಿದ್ದ ಕಬಕ ಮತ್ತು ಮುಕ್ರಂಪಾಡಿ ನಿವಾಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಕಬಕ ಕಟ್ಟೆಮನೆ ಮಸೀದಿ ಬಳಿಯ ದಿ.ಅಬ್ದುಲ್ ಖಾದರ್ ಎಂಬವರ ಮಗ ಮಹಮ್ಮದ್ ರಫೀಕ್ ಯಾನೆ ಮುನ್ನಾ(44ವ.)ಮತ್ತು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ದಿ.ಅಣ್ಣು ಪೂಜಾರಿಯವರ ಮಗ ತಾರಾನಾಥ ಪೂಜಾರಿ ಯಾನೆ ಪುಟ್ಟ(27ವ.)ಬಂಧಿತ ಆರೋಪಿಗಳು. ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಲೈಮಾರ್ ಪಿ.ಮತ್ತು ಸಿಬ್ಬಂದಿಗಳು ಜೂ.17ರಂದು ನರಹರಿಪವರ್ತಕ್ಕೆ ಹೋಗುವ ರಸ್ತೆಯಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಪೊಲೀಸರು ಬರುವುದನ್ನು ಕಂಡು ಓಡಲೆತ್ನಿಸಿದರು. ಪೊಲೀಸರು ಅವರನ್ನು ಸುತ್ತುವರಿದು ಹಿಡಿದು ವಿಚಾರಣೆ ನಡೆಸಿದಾಗ ಅವರು ಅಕ್ರಮವಾಗಿ ಗಾಂಜಾ ಹೊಂದಿರುವುದು ಕಂಡು ಬಂದಿದೆ.ಪೊಲೀಸರು ಆರೋಪಿಗಳನ್ನು ಬಂಧಿಸಿ 355 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ರೂ.7500 ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಎಎಸ್ಪಿ ಕಛೇರಿಯ ವಿಶೇಷ ಸಿಬಂದಿಗಳಾದ ಉದಯ ರೈ, ಕುಮಾರ್ ಕೆ ಮತ್ತು ಚಾಲಕ ನಾಗರಾಜ್ ಪಾಲ್ಗೊಂಡಿದ್ದರು.