- ಶಾಲೆಯ ಅಭಿವೃದ್ಧಿ ಊರವರ ಜವಾಬ್ದಾರಿ-ಎಸ್.ಡಿ ವಸಂತ
ಪುತ್ತೂರು: ಶಾಲೆಯ ಅಭಿವೃದ್ಧಿ ಮಾಡುವುದು ಊರವರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಕಲ್ಪಣೆ ಸರಕಾರಿ ಪ್ರಾಥಮಿಕ ಶಾಲೆಯ ಅವಶ್ಯಕತೆಗಳನ್ನು ಪೂರೈಸಲು ಎಲ್ಲರೂ ಕೈ ಜೋಡಿಸಬೇಕೆಂದು ಮುಂಡೂರು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಎಸ್.ಡಿ ವಸಂತ ಹೇಳಿದರು. ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ `ಶಾಲೆಯೊಂದಿಗೆ ನಾವು ನೀವು’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್ಡಿಎಂಸಿ, ಶಿಕ್ಷಕ ವೃಂದದವರು ಶಾಲಾ ಅಭಿವೃದ್ಧಿ ವಿಷಯದಲ್ಲಿ ಇಚ್ಛಾಶಕ್ತಿ ತೋರಿದಾಗ ಊರವರೂ ಜೊತೆಗೆ ಸೇರಿಕೊಳ್ಳುತ್ತಾರೆ. ಗತ ಇತಿಹಾಸ ಹೊಂದಿರುವ ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು, ಶಾಲೆಯ ಅಭಿವೃದ್ಧಿಗೆ ನನ್ನಿಂದಾದ ಸರ್ವ ವಿಧದ ಸಹಕಾರವನ್ನು ನೀಡಲು ಸದಾ ಸಿದ್ದನಿದ್ದೇನೆ ಎಂದು ಅವರು ಹೇಳಿದರು.
ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯಗುರು ಮಹಾಬಲ ರೈ ಮಾತನಾಡಿ ವಿದ್ಯಾರ್ಥಿಗಳ ಕಲಿಕೆ ಬಗ್ಗೆ ಪೋಷಕರೂ ಕೂಡಾ ಮುತುವರ್ಜಿ ವಹಿಸಬೇಕು. ಶಾಲೆಯ ಅಭಿವೃದ್ಧಿ ವಿಷಯದಲ್ಲೂ ಮಕ್ಕಳ ಪೋಷಕರು ಶಾಲೆಯ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಕಮಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸುನೀತಾ ಹಾಗೂ ಜ್ಯೋತಿಯವರು ಕಲಿಕಾ ಚೇತರಿಕೆ ವರ್ಷ ವಿಷಯದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಉಮಾವತಿ, ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದ ವಿಘ್ನೇಶ್, ಶಾಲಾ ವಿದ್ಯಾರ್ಥಿ ನಾಯಕ ಅಬ್ದುನಾಫಿಹ್ ಉಪಸ್ಥಿತರಿದ್ದರು. ಇತ್ತೀಚೆಗೆ ಶಾಲಾ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದ್ದ ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗಕ್ಕೆ ಸ್ಮರಣಿಕೆ ನೀಡಿ ಅಭಿನಂದಿಲಾಯಿತು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ದೈ.ಶಿ.ಶಿಕ್ಷಕ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸತೀಶ್, ಚಂದ್ರಶೇಖರ್ ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಫ್ಯಾನ್ ಕೊಡುಗೆ: ಪೋಷಕರಾದ ಜಯಪ್ರಕಾಶ್, ತಾಜು ರಫೀಕ್, ರಹೀಂ ರೆಂಜಲಾಡಿ ಹಾಗೂ ಅಶ್ರಫ್ ರೆಂಜಲಾಡಿ ಮೊದಲಾದವರು ನೀಡಿದ ಫ್ಯಾನ್ನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಫ್ಯಾನ್ ಕೊಡುಗೆ ನೀಡಿದವರಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಶಾಲೆಯ ಅಭಿವೃದ್ಧಿಗೆ ಚಿಂತನೆ
ನಮ್ಮ ಶಾಲೆಗೆ ತನ್ನದೇ ಆದ ಇತಿಹಾಸ ಇದೆ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಶಾಲೆಯ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದ್ದು ಗ್ರಾಮಸ್ಥರನ್ನು ಸೇರಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಮತ್ತು ಶಾಲಾ ಬೇಡಿಕೆಗಳ ಈಡೇರಿಕೆಗೆ ಚಿಂತನೆ ನಡೆಸಲಾಗಿದೆ. ಈ ಶಾಲೆಯ 60ನೇ ವಾರ್ಷಿಕೋತ್ಸವವನ್ನು ಹಬ್ಬದ ರೀತಿಯ ಸಂಭ್ರಮದಲ್ಲಿ ಏರ್ಪಡಿಸಿ ಯಶಸ್ವಿಯಾಗಿದ್ದೇವೆ. ಆ ಸಂದರ್ಭದಲ್ಲಿ ಊರ ಮಹನೀಯರು ಸಹಕಾರ ನೀಡಿದ್ದಾರೆ, ಮುಂದಕ್ಕೂ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು ಅದಕ್ಕೂ ತಾವೆಲ್ಲರೂ ಸಹಕಾರ ನೀಡಬೇಕು.
-ಕೆ.ಎಂ ಹನೀಫ್ ರೆಂಜಲಾಡಿ, ಅಧ್ಯಕ್ಷರು ಎಸ್ಡಿಎಂಸಿ