ಪುತ್ತೂರು:ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ, ಮಹಿಳೆಯೋರ್ವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿರುವ ಪ್ರಕರಣದಲ್ಲಿ ಗ್ರಾ.ಪಂ.ಪಿಡಿಒ, ಅಸಿಸ್ಟೆಂಟ್ ಇಂಜಿನಿಯರ್ ಸಹಿತ ಐವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತೆಕ್ಕಾರು ಗ್ರಾ.ಪಂ.ಸದಸ್ಯೆಯಾಗಿರುವ ಬಾಜಾರು ನಿವಾಸಿ ಶ್ರೀಮತಿ ಯಮುನಾ ನಾಕ ಎಂಬವರು ಈ ಕುರಿತು ದೂರು ನೀಡಿದ್ದವರು.ತೆಕ್ಕಾರು ಬಡಿಹಿತ್ತಿಲು ಅಬ್ದುಲ್ ರಝಾಕ್,ತೆಕ್ಕಾರು ಬಂಬಿಲದ ಅಬ್ದುಲ್ ರಹಿಮಾನ್, ತೆಕ್ಕಾರು ಗ್ರಾ.ಪಂ.ಪಿಡಿಒ ಸುಮಯ್ಯ, ಬೆಳ್ತಂಗಡಿಯ ಅಸಿಸ್ಟೆಂಟ್ ಇಂಜಿನಿಯರ್ ಗಪೂರ್ ಸಾಬ್ ಹಾಗೂ ಅನಾಲಿಕೆ ಶೇಖರ ಪೂಜಾರಿ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಯಮುನಾ ನಾಯ್ಕರವರ ಜಮೀನಿಗೆ ಸುಮಾರು ೬ ತಿಂಗಳ ಹಿಂದೆ ಆರೋಪಿಗಳು ಅಕ್ರಮ ಪ್ರವೇಶಿಸಿ, ಬುಲ್ಡೋಜರ್ ಮತ್ತು ಟಿಪ್ಪರ್ ಮೂಲಕ ಕಾಮಗಾರಿಕೆಯನ್ನು ನಡೆಸಿ, ಆಕೆ ನೆಟ್ಟಿದ್ದ ಗೇರು ಮರಗಳನ್ನು ನಾಶ ಮಾಡಿ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿ ಯಮುನಾರವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.ನ್ಯಾಯಾಲಯದ ನಿರ್ದೇಶನದಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳಿಗೆ ಪುತ್ತೂರಿನ ಐದನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಅಬ್ದುಲ್ ಮಜೀದ್ ಖಾನ್, ಅಶ್ರಫ್ ಅಗ್ನಾಡಿ, ಸಲೀನಾರವರು ವಾದಿಸಿದ್ದರು.