ಬೆಟ್ಟಂಪಾಡಿ: ಇಲ್ಲಿನ ಗ್ರಾಮ ಪಂಚಾಯತ್ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ಜೂ. 21 ರಂದು ಬೆಟ್ಟಂಪಾಡಿ ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಡಿ. ವಹಿಸಿ ಮಾತನಾಡಿ ‘ಆರೋಗ್ಯವಾಗಿರಬೇಕೆಂಬ ಯೋಚನೆ ಎಲ್ಲರಲ್ಲಿರುತ್ತದೆ. ಆದರೆ ಅದಕ್ಕೆ ಕಾರ್ಯಾನುಷ್ಟಾನ ಮಾಡುತ್ತಿಲ್ಲ. ಹಿಂದೆ ನಮಗೆಲ್ಲಾ ದೈನಂದಿನ ಜೀವನವೇ ಯೋಗವಾಗಿತ್ತು’ ಎಂದರು.
ಯೋಗ ಪ್ರಾಣ ವಿದ್ಯಾ ತರಬೇತುದಾರ ರಾಮಗೋಪಾಲ್ ನಿಡ್ವಣ್ಣಾಯರು ಪ್ರಾಣಿವಿದ್ಯಾ ತರಬೇತಿ ನೀಡಿದರು. ಉಸಿರಾಟದ ಪ್ರಾಮುಖ್ಯತೆ, ಉಸಿರಾಟದ ವಿಧಾನಗಳು, ಮನಸ್ಸು, ಶರೀರದ ವಿಭಾಗಗಳ ಬಗ್ಗೆ ವಿವರಿಸಿದ ಅವರು ಕೊರೋನಾದಂತಹ ಸಮಯದಲ್ಲಿ ರೋಗಿಯಲ್ಲಿರುವ ರೋಗಬಾಧೆಯನ್ನು ದೂರದಿಂದಲೇ ಕುಳಿತು ನಿವಾರಿಸಿದ ಬಗೆಯನ್ನು ಹೇಳಿದರು.
ಪ್ರಾಸ್ತಾವಿಕದೊಂದಿಗೆ ಮಾತನಾಡಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ‘ನಮ್ಮಲ್ಲಿ ಏಕಾಗ್ರತೆ ಸೃಷ್ಟಿಸುವ ಶಕ್ತಿ ಯೋಗಕ್ಕಿದೆ. ಉತ್ತಮ ಜೀವನಕ್ಕೆ, ಆರೋಗ್ಯಕ್ಕೆ ನಿರಂತರ ಯೋಗಾಭ್ಯಾಸ ಅತ್ಯಂತ ಅವಶ್ಯಕ ಎಂದು ಹೇಳಿ ಯೋಗಾಭ್ಯಾಸದಿಂದ ತನಗಾದ ಅನುಭವವನ್ನು ಮುಂದಿಟ್ಟರು.
ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರೊ. ಹರಿಪ್ರಸಾದ್ ರವರು ಮಾತನಾಡಿ ‘ವ್ಯವಸ್ಥಿತ ಜೀವನ ಕ್ರಮಕ್ಕೆ ಯೋಗ ಅಗತ್ಯ’ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ರೈ, ಯೋಗ ಪ್ರಾಣವಿದ್ಯಾ ಚಿಕಿತ್ಸಕಿ ಪೂರ್ಣಿಮಾ ರಾಮ್ಗೋಪಾಲ್ ಉಪಸ್ಥಿತರಿದ್ದರು.
ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಎಂ.ಎಸ್. ಗಂಗಾಧರ ಗೌಡ, ಚಂದ್ರಶೇಖರ ರೈ ಬಾಲ್ಯೊಟ್ಟು, ಬೆಟ್ಟಂಪಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಬೂತ್ ಅಧ್ಯಕ್ಷ ಶಿವಕುಮಾರ್ ಬಲ್ಲಾಳ್, ಮೋನಪ್ಪ ಗೌಡ ಮಿತ್ತಡ್ಕ, ಚಂದ್ರಶೇಖರ, ಕೊರಗಪ್ಪ ಗೌಡ, ಸಂಜೀವ ಗುಂಡ್ಯಡ್ಕ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾಲೇಜು ವಿದ್ಯಾರ್ಥಿನಿಯರಾದ ಲಿಖಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಪಿಡಿಒ ಸಂದೇಶ್ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ್ ವಂದಿಸಿದರು.