ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಎಸ್ಡಿಪಿಐ ನಿರಂತರ ಹೋರಾಡುತ್ತಿದೆ-ಮಜೀದ್ ಖಾನ್
ಪುತ್ತೂರು: ಎಸ್ಡಿಪಿಐ ಪಕ್ಷದ 13ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಮಜೀದ್ ಖಾನ್ ಮಾತನಾಡಿ ಎಸ್ಡಿಪಿಐ ಪಕ್ಷವು ಜನ ಸಾಮಾನ್ಯರ ಪರವಾಗಿ ದೇಶದಲ್ಲಿ ಸದಾ ಧ್ವನಿ ಎತ್ತುತ್ತಿದ್ದು ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳಿಗಿಂತ ನಮ್ಮ ಪಕ್ಷ ವಿಭಿನ್ನವಾಗಿದ್ದು ಕಠಿಣ ಹಾದಿಯಲ್ಲೂ ನ್ಯಾಯಪರವಾಗಿ ದೃಢವಾಗಿ ನಿಂತು ಹೋರಾಟ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲು ತಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಹೋರಾಟದ ಮೂಲಕ ರಾಜಕೀಯ-ಇಬ್ರಾಹಿಂ ಸಾಗರ್
ಧ್ವಜಾರೋಹಣ ನೆರವೇರಿಸಿದ ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಎಸ್ಡಿಪಿಐ ಪಕ್ಷ ಹೋರಾಟದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಅನ್ಯಾಯ, ಅನೀತಿಗಳ ವಿರುದ್ಧ ಸದಾ ಧ್ವನಿ ಎತ್ತುತ್ತಾ ಬಂದಿದೆ. ಪ್ರಬುದ್ಧ ಮತ್ತು ನೆಮ್ಮದಿಯ ನಾಳೆಗಾಗಿ ಎಸ್ಡಿಪಿಐ ಜೊತೆ ಕೈ ಜೋಡಿಸಿ ಎಂದು ಅವರು ಹೇಳಿದರು.
ಎಸ್ಡಿಪಿಐ ಮುಖಂಡ ಸಿದ್ದೀಕ್ ಕೆ.ಎ, ಎಸ್ಡಿಪಿಐ ಪುತ್ತೂರು ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವ, ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪುತ್ತೂರು ಸ್ವಾಗತಿಸಿ ವಂದಿಸಿದರು.