- ಕುಂಬ್ರ ಕೆಪಿಎಸ್ ಸ್ಕೂಲ್ ದ್ವಾರದಲ್ಲೇ ಅಪಾಯಕಾರಿ ಸನ್ನಿವೇಶ
ಪುತ್ತೂರು; ಸಣ್ಣ ಗಾಳಿ ಬಂದರೆ ಸಾಕು ಇಲ್ಲಿನ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ಸ್ಪರ್ಶವಾಗುತ್ತದೆ, ಈ ಕಾರಣಕ್ಕೆ ಕೆಲವೊಮ್ಮೆ ಬೆಂಕಿಯೂ ಕಾಣಿಸಿಕೊಳ್ಳುತ್ತದೆ ಈ ದೃಶ್ಯ ಕಂಡು ಬರುವುದು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ದ್ವಾರದ ಬಳಿ.
ಶಾಲಾ ದ್ವಾರದ ಬಳಿ ಭಾರೀ ಗಾತ್ರದ ಮರಗಳಿವೆ, ಇದರ ಅಡಿಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿವೆ. ಗಾಳಿ ಬರುವಾಗ ಮರದ ಗೆಲ್ಲುಗಳು ವಿದ್ಯುತ್ ತಂತಿಗೆ ತಾಗುವುದರಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇಲ್ಲಿರುವ ಮರಗಳನ್ನು ಕಡಿಯಬೇಕೆಂದು ಪೋಷಕರು ಆಗ್ರಹಿಸಿದ್ದರೂ ಮರಗಳು ಮಾತ್ರ ಅಪಾಯಕಾರಿಯಾಗಿಯೇ ಇದೆ.
ಪ್ರತೀ ದಿನ ಬೆಳಿಗ್ಗೆಯಿಂದ ಸಂಜೆ ತನಕ ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು , ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಮಳೆಗಾಲದಲ್ಲಿ ಬರುವ ಗಾಳಿಗೆ ಮರದ ಗೆಲ್ಲು ಮುರಿದು ಬಿದ್ದು ಅಪಾಯ ಉಂಟಾಗುವ ಸಂಭವ ಇದೆ. ಇಲ್ಲಿನ ಅಪಾಯದ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೆ ಮರಗಳು ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ಯಾರೂ ಅದರ ಗೆಲ್ಲನ್ನು ಕಡಿಯಲು ಮುಂದೆ ಬರುತ್ತಿಲ್ಲ. ಶಾಲಾ ದ್ವಾರದಿಂದ ಶಾಲೆಯ ತನಕ ರಸ್ತೆ ಬದಿಯಲ್ಲಿ ಮರದ ಗೆಲ್ಲುಗಳು ಅಪಾಯವನ್ನು ಆಹ್ವಾನಿಸುತ್ತಿದೆ. ಸಂಬಂಧಿಸಿದವರು ಇಲ್ಲಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಮಾಡಬೇಕಿದೆ ಎಂಬುದು ಶಾಲಾ ಪೋಷಕರ ಆಗ್ರಹವಾಗಿದೆ.