ಪುತ್ತೂರು : ಕಾಳುಮೆಣಸು ಕಳ್ಳತನ ಮಾಡಿದ ಆರೋಪದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಾಲ್ಕು ಮಂದಿ ಆರೋಪಿಗಳಲ್ಲಿ ಇಬ್ಬರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕೊಳ್ತಿಗೆಯ ತೋಟದಲ್ಲಿರುವ ಗೋದಾಮಿನಲ್ಲಿ ಶೇಖರಿಸಿದ್ದ ಸುಮಾರು 1 ಲಕ್ಷದ 18 ಸಾವಿರ ಮೌಲ್ಯದ ಕಾಳುಮೆಣಸಿನ 10 ಚೀಲಗಳನ್ನು ಗೋದಾಮಿನ ಬೀಗ ಒಡೆದು ಕಳವು ಮಾಡಿದ್ದ ಆರೋಪದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಮಂಜು, ಅಬ್ದುಲ್ ಬಾಶೀತ್, ಪ್ರವೀಣ್ ಹಾಗೂ ಪವನ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಸೀನಿಯರ್ ಸಿವಿಲ್ ಜಡ್ಜ್ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಜುಲೈ 14ರಂದು ಆರೋಪಿಗಳ ಪೈಕಿ ಒಂದನೇ ಆರೋಪಿ ಮಂಜು, ಮತ್ತು ೪ ನೇ ಆರೋಪಿ ಅಬ್ದುಲ್ ಬಾಸಿತ್ರ ಪರವಾಗಿ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ಆರೋಪಿಗಳಿಗೆ ತಲಾ ಎರಡು ಜಾಮೀನುಗಳನ್ನು ನೀಡುವ ಶರತ್ತಿನ ಮೇರೆಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಆದೇಶ ನೀಡಿದ್ದಾರೆ. ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ರವರು ವಾದಿಸಿದ್ದರು.