ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲಯನ್ಸ್ ಕ್ಲಬ್ ಪುತ್ತೂರು, ಪಾಣಾಜೆ ಇದರ ಜಂಟಿ ಸಹಯೋಗದೊಂದಿಗೆ ರಾಜ್ಯ ಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರ ನೇತೃತ್ವದಲ್ಲಿ ಅಥ್ಲೆಟಿಕ್ ಪ್ರಾಥಮಿಕ ತರಬೇತಿ ಶಿಬಿರದ ಉದ್ಘಾಟನೆಯು ಜು.೨೮ರಂದು ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನೆರವೇರಿತು.
ಅಥ್ಲೆಟಿಕ್ ಪ್ರಾಥಮಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿದ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಮಾತನಾಡಿ, ವಿದ್ಯಾರ್ಥಿಗಳೇ ಕ್ರೀಡೆಯಲ್ಲಿ ಸಾಧಿಸಬೇಕಾದರೆ ನಿಯಮಿತ ತರಬೇತಿ, ಸಮಯ ಪ್ರಜ್ಞೆ ಅತಿ ಮುಖ್ಯ. ಕ್ರೀಡೆ ಮಾನಸಿಕ ಮತ್ತು ದೈಹಿಕವಾಗಿ ಎರಡರಲ್ಲೂ ಮನುಷ್ಯನನ್ನು ಸದೃಢವಾಗಿಸುತ್ತದೆ. ಕ್ರೀಡೆ ಶೈಕ್ಷಣಿಕ ಸಾಧನೆಗೆ ಪೂರಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಿಟ್ಲ್ ಫ್ಲವರ್ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್. ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳನ್ನು ಪಳಗಿಸಿದ ಒಬ್ಬ ಶಿಸ್ತಿನ ಸಿಪಾಯಿ ದಯಾನಂದ ರೈಯವರು ವೃತ್ತಿಯಿಂದ ನಿವೃತ್ತರಾದರು ಪ್ರವೃತ್ತಿಂದ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ನಿಮ್ಮ ಮುಖಾಂತರ ಇನ್ನಷ್ಟು ವಿಧ್ಯಾರ್ಥಿಗಳು ಸಾಧಕರಾಗಿ ಹೊರಬರಲಿ ಎಂದರು.
ಲಯನ್ಸ್ ಕ್ಲಬ್ ಪುತ್ತೂರು, ಪಾಣಾಜೆಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಹಾಗೂ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಚಿನ್ಮಯಿ, ಪ್ರೀತಿಕಾ, ಜೀವಿತ, ವಿಜೇತ ಪ್ರಾರ್ಥಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.