- ಸಂಸ್ಕೃತಿ ಜಾಗೃತಿ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ: ಒಡಿಯೂರು ಶ್ರೀ
ವಿಟ್ಲ: ಲಕ್ಷ್ಮಿ ಸಂಪತ್ತಿನ ಅಧಿಪತಿ ದೇವತೆ. ಸೇವೆಗೆ ಇನ್ನೊಂದು ಹೆಸರು ಲಕ್ಷ್ಮಿ ಹಾಗೂ ಹನುಮಂತ. ಅರ್ಪಣಾ ಭಾವದ ಸೇವೆ ನಮ್ಮಲ್ಲಿರಬೇಕು. ನಾವು ನಮ್ಮದೆಂದು ಕೆಲಸ ಮಾಡಿದಾಗ ಅದರಲ್ಲಿ ಸತ್ಫಲ ಹೆಚ್ಚು. ಸಂಸ್ಕೃತಿ ಜಾಗೃತಿ ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಆ.೫ರಂದು ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ನಡೆದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ವೃತಪೂಜೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಪರಿಪಾಲನೆ ಇಲ್ಲದಿದ್ದರೆ ಯಾವುದೂ ನಡೆಯಲು ಸಾಧ್ಯವಿಲ್ಲ. ನಮ್ಮಲ್ಲಿ ಇಚ್ಚಾ ಶಕ್ತಿ, ಕ್ರೀಯಾ ಶಕ್ತಿ, ಜ್ಞಾನ ಶಕ್ತಿ ಒಟ್ಟಾದರೆ ಮಾತ್ರ ಬದುಕು ಬದುಕಾಗಲು ಸಾಧ್ಯ.
ಸನಾತನ ಸಂಸ್ಕೃತಿಯ ನೆಲೆಗಟ್ಟಿಗೆ ಇಂತಹ ನಿಷ್ಟೆ, ಅನುಷ್ಠಾನ, ವೃತಾಚರಣೆ ಅಗತ್ಯ. ಅತಿಯಾದ ಆಸೆ ಬೇಡ, ಆಸೆಗಳೆಲ್ಲವೂ ಮಿತಿಯಲ್ಲಿದ್ದರೆ ಜೀವನ ಚಂದ ಎಂದರು. ಸಾದ್ವಿ ಶ್ರೀ ಮಾತಾನಂದಮಯಿ ದಿವ್ಯಸಾನಿಧ್ಯ ವಹಿಸಿದ್ದರು.
ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವೇ.ಮೂ. ಚಂದ್ರಶೇಖರ ಉಪಾದ್ಯಾಯರ ಪೌರೋಹಿತ್ಯದಲ್ಲಿ ಶ್ರೀವರಮಹಾಲಕ್ಷ್ಮೀವೃತಪೂಜೆಯ ವಿಧಿವಿಧಾನ ನೆರವೇರಿತು.