ವಿಟ್ಲ: ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿಟ್ಲದ ಚಂದಳಿಕೆಯ ವೀರಾಂಜನೇಯ ವ್ಯಾಯಾಮ ಶಾಲೆಯ ಸಂಸ್ಥಾಪಕ ಎನ್. ದೇಜಪ್ಪ ಪೂಜಾರಿ ನಿಡ್ಯ ರವರು ಆಯ್ಕೆಯಾಗಿದ್ದಾರೆ. ಇವರ ಕಲಾ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ದೇಜಪ್ಪ ಪೂಜಾರಿಯವರು ದೇಶದ ಪುರಾತನ ಕತ್ತಿವರಸೆ, ತಾಲೀಮು ಕಲೆಯನ್ನು ಕಲಿತು ಅದನ್ನು ಬೆಳೆಸುವ ನಿಟ್ಟಿನಲ್ಲಿ ಕೆಲ ವರುಷಗಳಿಂದ ಚಂದಳಿಕೆಯಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆಯನ್ನು ಹುಟ್ಟುಹಾಕಿ ನೂರಾರು ಮಂದಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾ ಬರುತ್ತಿದ್ದಾರೆ.
ಇವರ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ತಂಡದಲ್ಲಿ 60ಕ್ಕೂ ಮಿಕ್ಕಿ ಸಕ್ರಿಯ ಸದಸ್ಯರಿದ್ದು ಊರಿನ ಜಾತ್ರೆ, ಹಬ್ಬ ಹಾಗೂ ವಿಶೇಷ ಸಂದರ್ಭದಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬರುತ್ತಿದೆ. ಇವರಿಂದ ಶಿಕ್ಷಣ ಪಡೆದವರು ಎರಡು ಸಲ ರಾಜ್ಯಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಮಿಂಚಿದ್ದಾರೆ. ರಾಷ್ಟ್ರಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕೀರ್ತಿಯೂ ಇದೆ. ಇಷ್ಟು ಮಾತ್ರವಲ್ಲದೆ ಮಕ್ಕಳಿಗೆ ಉಚಿತ ಯೋಗ ತರಗತಿಯನ್ನೂ ಅವರು ನೀಡುತ್ತಿದ್ದಾರೆ.
ಎನ್. ದೇಜಪ್ಪ ಪೂಜಾರಿ ನಿಡ್ಯರವರು ಬೀಡಿ ಕಂಟ್ರಾಕ್ಟರ್ ಆಗಿದ್ದು, ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ವಜ್ರಮಹೋತ್ಸವ ಸಮಿತಿ ಅಧ್ಯಕ್ಷರಾಗಿ, ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕಾಧ್ಯಕ್ಷರಾಗಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಕುಂಡಡ್ಕ ಇದರ ಗೌರವಾಧ್ಯಕ್ಷರಾಗಿದ್ದಾರೆ ಮಾತ್ರವಲ್ಲದೆ ಹಲವಾರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಪತ್ನಿಯರಾದ ಪುಷ್ಪಾ ಹಾಗೂ ಸುಮತಿ ನಿಡ್ಯಾ, ಮಕ್ಕಳಾದ ಚೇತನ್ ಕುಮಾರ್, ಚೈತ್ರಾ, ಸಾಗರ್, ವನ್ಸಾರವರೊಂದಿಗೆ ನಿಡ್ಯದ ಮನೆಯಲ್ಲಿ ವಾಸವಾಗಿದ್ದಾರೆ. ಪುತ್ರಿ ಚೈತ್ರಾರವರನ್ನು ಪುತ್ತೂರಿನ ಮುಕ್ರಂಪಾಡಿ ನಿವಾಸಿ ಚಂದ್ರಶೇಖರ ರವರಿಗೆ ವಿವಾಹ ಮಾಡಿಕೊಡಲಾಗಿದೆ. ಪುತ್ರ ಚೇತನ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.