ಉಪ್ಪಿನಂಗಡಿ ಎಂಬ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ನಡೆಸುವ ಇನ್ ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ರಾಜ್ಯದಲ್ಲಿ 1,10,000/- ಮಾದರಿಗಳು ನೋಂದಣಿಯಾಗಿದ್ದು 7541 ಮಾದರಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, 10, 000/- ರೂಪಾಯಿಗಳ ಪ್ರೋತ್ಸಾಹ ಧನ ಪಡೆಯಲು ಅರ್ಹತೆಯನ್ನು ಹೊಂದಿತ್ತು. ಇವುಗಳಲ್ಲಿ 741 ಮಾದರಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕೇವಲ 39 ಮಾದರಿಗಳು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದೆ. ಇವುಗಳಲ್ಲಿ ಉಪ್ಪಿನಂಗಡಿಯ ಸರಕಾರಿ ಶಾಲೆಯ ಎರಡು ಮಾದರಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಒಂದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದೆ.
ವಿದ್ಯಾರ್ಥಿನಿ ಜಾಹ್ನವಿ ರಚಿಸಿದ ಮೊಟ್ಟೆ ಸುಲಿಯುವ ಯಂತ್ರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಬೆಳ್ತಂಗಡಿ ಕಡವಿನಬಾಗಿಲು ನಿವಾಸಿ ಇಲಿಯಾಸ್ ಪಾಷ ಹಾಗೂ ಸಬಿಯಾ ಇವರ ಮಗ ಅಬ್ದುಲ್ ಬಾಷಿತ್ ತಯಾರಿಸಿದ “ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್” ( SIEVING CHAIR FOR HANDICAPS) ಎಂಬ ಮಾದರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಇದು ವಿಶೇಷ ಅಗತ್ಯವುಳ್ಳ ಮುಖ್ಯವಾಗಿ ಕೈಗಳನ್ನು ಕಳೆದುಕೊಂಡಿರುವ ವ್ಯಕ್ತಿಗಳಿಗೆ ಅನುಕೂಲವಾಗುವ ಮಾದರಿಯಾಗಿದೆ.
ಇನ್ ಸ್ಪಾಯರ್ ಅವಾರ್ಡ್ ಮಾನಕ್ ಸ್ಪರ್ಧೆಯು ಅತ್ಯಂತ ಕ್ಲಿಷ್ಟಕರ ಹಂತಗಳನ್ನು ಹೊಂದಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದೇ ಒಂದು ಸವಾಲಾಗಿರುತ್ತದೆ. ಸರಕಾರಿ ಶಾಲೆಯ ಈ ವಿದ್ಯಾರ್ಥಿ 2024 ಸೆಪ್ಟಂಬರ 14 ರಿಂದ 20ರವರೆಗೆ ದಿಲ್ಲಿಯ IIT (ಐಐಟಿ) ಕ್ಯಾಂಪಸ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ತನ್ನ ಮಾದರಿಯನ್ನು ಪ್ರದರ್ಶಿಸಲಿದ್ದಾನೆ. ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದಲ್ಲಿ ಜಪಾನ್ ನಲ್ಲಿ ನಡೆಯುವ “ಸುಕುರಾ” ಎಂಬ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಸುವರ್ಣಾವಕಾಶವನ್ನು ಪಡೆಯಲಿದ್ದಾನೆ. ಇವನಿಗೆ ಈ ವಿದ್ಯಾಸಂಸ್ಥೆಯ ವಿಜ್ಞಾನ ಶಿಕ್ಷಕಿ ಕೃಷ್ಣವೇಣಿ ರೈ ಇವರು ಮಾರ್ಗದರ್ಶನ ನೀಡಿರುತ್ತಾರೆ. ಸಹಶಿಕ್ಷಕಿ ನಯನ ಹಾಗೂ ಸುಜಯ ಸಹಕರಿಸಿರುತ್ತಾರೆ.
ಜೂನ್ 14ರಿಂದ ಜಪಾನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಾಗಾರಕ್ಕೆ ಪಾಲ್ಗೊಳ್ಳಲು ವಿದ್ಯಾರ್ಥಿಯ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ