ಪುತ್ತೂರು: ಬಸ್ ವ್ಯವಸ್ಥೆ ಸರಿಪಡಿಸಿ ಕೊಡುವಂತೆ ವಿದ್ಯಾರ್ಥಿಗಳು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪುತ್ತೂರು ಮತ್ತು ಸುಳ್ಯ ತಾಲೂಕುಗಳಿಗೆ ಸಂಬಂಧಪಟ್ಟ ಬೇರೆ ಬೇರೆ ಗ್ರಾಮಗಳಿಂದ ಹಾಗೂ ಊರುಗಳಿಂದ ಪುತ್ತೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದಾರೆ. ಆದರೆ ಬಸ್ ವ್ಯವಸ್ಥೆ ಸರಿಯಾಗಿಲ್ಲದಿರುವುದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬೆಳಿಗ್ಗೆ ಒಂಭತ್ತು ಗಂಟೆಗೆ ಆರಂಭವಾಗುವ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತರಗತಿಗೆ ಹಾಜರಾಗಲು ಅಸಾಧ್ಯವಾದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ಕಾಣುತ್ತದೆ. ಹಾಜರಾತಿ ಕೊರತೆ ಕಂಡು ಬಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ತೊಂದರೆಯಾಗುತ್ತದೆ.
ವಿದ್ಯಾರ್ಥಿಗಳು ಬಸ್ಪಾಸ್ ವ್ಯವಸ್ಥೆಗಾಗಿ ಸರಕಾರ ನಿಗದಿ ಪಡಿಸಿದ ಹಣವನ್ನು ಪಾವತಿಸಿದರೂ ಬಸ್ ವ್ಯವಸ್ಥೆ ಸರಿಯಿಲ್ಲವೆಂದಾದರೆ ವಿದ್ಯಾರ್ಥಿಗಳಲ್ಲಿ ಅಸಮಾಧಾನ ತಲೆ ಎತ್ತುತ್ತದೆ. ವಿದ್ಯಾರ್ಥಿಗಳ ಮನಸ್ಸು ಅನ್ಯ ಮಾರ್ಗವನ್ನು ಅನುಸರಿಸುವಂತಾಗುತ್ತದೆ. ಶಿಕ್ಷಣ ಸಂಸ್ಥೆಗಳ ಶಿಸ್ತಿಗೆ ಅಡ್ಡಿಯಾಗುತ್ತದೆ. ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತದೆ. ವಿಶೇಷವಾಗಿ ವಿಟ್ಲ, ಉಪ್ಪಿನಂಗಡಿ, ಬೆಳ್ಳಾರೆ, ಮಾಣಿ, ಸವಣೂರು, ಬೆಟ್ಟಂಪಾಡಿ, ಈಶ್ವರಮಂಗಲ, ಕಾವು ಮಾರ್ಗದ ಮೂಲಕ ಪುತ್ತೂರಿಗೆ ಬರುವ ಬಸ್ಸುಗಳ ವ್ಯವಸ್ಥೆ ಮತ್ತು ಸಮಯದ ಬಗ್ಗೆ ಗಮನಿಸಬೇಕು ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.