ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಆ.2ನೇ ತಾರೀಕಿನಂದು ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಭವನದಲ್ಲಿ ‘ಫಿಲೋ ಆಟಿದ ಕೂಟ’ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ‘ನವರಸರಾಜ’ ಭೋಜರಾಜ್ ವಾಮಂಜೂರು ಮಾತನಾಡಿ, ಆಧುನಿಕತೆಯ ಈ ಸಂದರ್ಭದಲ್ಲಿ ನಮ್ಮ ತುಳುನಾಡಿನ ಸಂಪ್ರದಾಯಗಳು, ಆಚರಣೆಗಳು ಮತ್ತು
ಸಂಸ್ಕೃತಿಗಳನ್ನು ಯುವ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಬೇಕು. ಕಲಾವಿದರನ್ನು ಪ್ರೋತ್ಸಾಹಿಸಿ, ತುಳುನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ತುಳುನಾಡಿನ ಭಾಷೆ, ಸಂಸ್ಕೃತಿಗೆ ಅದರದ್ದೇ ಆದ ಮಹತ್ವ ಇದೆ. ಅದರಲ್ಲೂ ತುಳುನಾಡಿನಲ್ಲಿ ಆಟಿ ತಿಂಗಳು ಬಹಳ ವಿಶೇಷತೆಯನ್ನು ಪಡೆದುಕೊಂಡಿದೆ. ಹಿರಿಯರು ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಿದ್ದು, ಅದನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಿ, ಬೆಳೆಸುವ ಕೆಲಸ ನಡೆಯಬೇಕಾಗಿದೆ. ಆರೋಗ್ಯದೊಂದಿಗೆ ನಮ್ಮ ಸಂಬಂಧಗಳನ್ನು ಉಳಿಸುವ ಕೆಲಸವನ್ನು ಮಾಡುವ ಅನಿವಾರ್ಯತೆ ಇದೆ ಎಂದು ಆಟಿ ತಿಂಗಳ ಮಹತ್ವವನ್ನು ಹೇಳಿ ಆಟಿ ಕೂಟದ ಶುಭಾಶಯಗಳನ್ನು ಕೋರಿದರು.
ವೇದಿಕೆಯಲ್ಲಿ ಕಲಾಸವ್ಯಸಾಚಿ ಪ್ರಶಾಂತ್ ಸಿ.ಕೆ, ಹಾಸ್ಯದರಸು ಸುಂದರ ಬಂಗಾಡಿ, ಪುತ್ತೂರು ಮಾಯಿ ದೆ ದೇವುಸ್ ಚರ್ಚ್ ನ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ’ ಕೋಸ್ಟಾ ಹಾಗೂ ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷರಾದ ದಿವ್ಯಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆಯಾಗಿ ಕಲಾಸವ್ಯಸಾಚಿ ಪ್ರಶಾಂತ್ ಸಿ .ಕೆ ಹಾಗೂ ಹಾಸ್ಯದರಸು ಸುಂದರ ಬಂಗಾಡಿಯವರಿಂದ ‘ಕುಸಲ್ದ ರಸ’ ಕಾರ್ಯಕ್ರಮ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ಭರತನಾಟ್ಯ, ಕಂಗೀಲು, ಆಟಿಕಳೆಂಜ, ಗೊಂಬೆ ಕುಣಿತ,ಹುಲಿ, ಕರಡಿ ಕುಣಿತ ಮತ್ತು ತುಳುನಾಡಿನ ವೈಭವವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಆಟಿ ತಿಂಡಿಯ ಪ್ರದರ್ಶನವು ನಡೆಯಿತು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಜ್ಯೋತಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿಯಾದ ಉಷಾ.ಎ ವಂದಿಸಿ, ವಿದ್ಯಾರ್ಥಿನಿಯರಾದ ತನ್ವಿ ಹಾಗೂ ರಶ್ವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.