ಉಪ್ಪಿನಂಗಡಿ: ಹಿಂದೂ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಅಲ್ಲಿನ ಧರ್ಮಾಧಿಕಾರಿಯವರ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಬರುವಂತೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ಕೃತಕ (ಏಐ ಆಧಾರಿತ) ಹಾಗೂ ಅಪ್ರಮಾಣಿತ ವಿಡೀಯೋಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿ ಸಮೀರ್ ಎಂ.ಡಿ. ಎಂಬಾತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಉಪ್ಪಿನಂಗಡಿಯಲ್ಲಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದರು.
ಉಪ್ಪಿನಂಗಡಿಯ ಕೋಟೆ ನಿವಾಸಿ ಆದೇಶ್ ಶೆಟ್ಟಿ ಎಂಬವರು ಲಿಖಿತ ದೂರು ಸಲ್ಲಿಸಿ, ಆರೋಪಿತನು ಧರ್ಮಸ್ಥಳ ಅಸಹಜ ಸಾವುಗಳು, ಗುಪ್ತ ಸಮಾಧಿಗಳು ಇತ್ಯಾದಿ ಬಗ್ಗೆ ಅಸತ್ಯ ಮಾಹಿತಿ ಮತ್ತು ಸುಳ್ಳು ವಿಡಿಯೋಗಳನ್ನು ಪ್ರಕಟಿಸಿರುವುದರಿಂದ, ಕೋಟ್ಯಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳು ಗಂಭೀರವಾಗಿ ಹಾನಿಗೊಳಗಾಗಿವೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ, ಧಾರ್ಮಿಕ ಸಂಘರ್ಷ ಸೃಷ್ಟಿಸುವ ಸಾಧ್ಯತೆ ಉಂಟಾಗಿದೆ. ಈ ಕಾರಣದಿಂದ ಭಾರತೀಯ ನ್ಯಾಯ ಸಂಹಿತೆಯಡಿ ಸೆಕ್ಷನ್ 192 – ಸುಳ್ಳು ಮಾಹಿತಿ ಹಂಚುವುದು. ಸೆಕ್ಷನ್ 194 ಧರ್ಮ ಅಥವಾ ಜಾತಿಗಳ ನಡುವೆ ದ್ವೇಷ ಬಿತ್ತುವುದು. ಸೆಕ್ಷನ್ 240 – ಮೋಸಾತ್ಮಕ ಮತ್ತು ತಪ್ಪು ವಿಷಯ ಪ್ರಸಾರ, ಸೆಕ್ಷನ್ 298 – ಧಾರ್ಮಿಕ ಭಾವನೆಗಳಿಗೆ ಅವಮಾನ ಉಂಟು ಮಾಡುವುದು. ಸೆಕ್ಷನ್ 353(೧) (b) ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ. ಸೆಕ್ಷನ್ 356 – ಮಾನಹಾನಿ (Defamation), ಸೆಕ್ಷನ್ 61 – ಅಪರಾಧ ಮಾಡಲು ಷಡ್ಯಂತರ, ಸೆಕ್ಷನ್ 66 ಆ- ಮೋಸಾತ್ಮಕ ವಿಧಾನದಲ್ಲಿ ಮಾಹಿತಿ ಪ್ರಸಾರ , ಸೆಕ್ಷನ್ 690 – ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯಗಳನ್ನು ತಡೆಯುವ ಅಧಿಕಾರ ದಡಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ದೂರು ಸಲ್ಲಿಸಿದ ಸಮಯದಲ್ಲಿ ಪ್ರಮುಖರಾದ ಜಯಂತ ಪೊರೋಳಿ, ಧನಂಜಯ್ ನಟ್ಟಿಬೈಲ್, ಉಷಾ ಮುಳಿಯ, ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಪ್ರಸಾದ್ ಭಂಡಾರಿ, ಪ್ರಶಾಂತ್ ರಾಮಕುಂಜ, ಕಿಶೋರ್ ನೀರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.