2026ನೇ ಜ.24, 25ರ ಐತಿಹಾಸಿಕ ಕಂಬಳದ ಪ್ರಥಮ ಸಭೆಯಲ್ಲಿ ಎನ್ ಚಂದ್ರಹಾಸ ಶೆಟ್ಟಿ
ಯಾರೆ ಬರಲಿ, ಬಾರದೆ ಇರಲಿ ಪುತ್ತೂರು ಕಂಬಳ ನಿರೀಕ್ಷೆಗೂ ಮೀರಿ ನಡೆಯಲಿದೆ – ವಿನಯ ಕುಮಾರ್ ಸೊರಕೆ
ಪುತ್ತೂರು ಕಂಬಳ ಮಹಾಲಿಂಗೇಶ್ವರನ ಸಾನಿಧ್ಯದ ಎದುರೇ ನಡೆಯಲಿ – ಶಕುಂತಳಾ ಶೆಟ್ಟಿ
ಕಂಬಳ ದೇವರಿಗೆ ಹತ್ತಿರವಾಗುತ್ತಿದೆ – ಈಶ್ವರ ಭಟ್ ಪಂಜಿಗುಡ್ಡೆ
ದ.ಕ. ಉಡುಪಿ ಜಿಲ್ಲೆಯಲ್ಲೇ ಹೆಸರು ಪಡೆದ ಕಂಬಳ – ವಸಂತ ಕುಮಾರ್ ರೈ
ಪುತ್ತೂರು: ಪುತ್ತೂರಿನ ಐತಿಹಾಸಿಕ ಕೋಟಿಚೆನ್ನಯ ಜೋಡುಕರೆ ಕಂಬಳದ ಆರಂಭದಲ್ಲಿ ಹಲವು ಹಿರಿಯರ ಪರಿಶ್ರಮದ ಮೂಲಕ ಕರೆಯನ್ನು ನಿರ್ಮಾಣ ಮಾಡಿದ್ದಾರೆ. ಈಗ ಅದು ಸುಲಭವಲ್ಲ. ಈ ಭಾರಿ ಕಂಬಳದ ಬಳಿಕ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಸಂದರ್ಭ ಹೊಸ ಕರೆ ನಿರ್ಮಾಣ ಮಾಡುವುದಾಗಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿಯವರು ಹೇಳಿದ್ದಾರೆ.

2026ರ ಜ. 24 ಮತ್ತು 25ರಂದು ನಡೆಯುವ ಪುತ್ತೂರಿನ ಐತಿಹಾಸಿಕ ಕೋಟಿಚೆನ್ನಯ ಜೋಡುಕರೆ ಕಂಬಳಕ್ಕೆ ಪೂರ್ವ ಸಿದ್ಧತೆಯಾಗಿ ಪ್ರಥಮ ಸಭೆಯು ನ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ ಮಾತನಾಡಿ, ಕಂಬಳ ದಿನ ಕಳೆದಂತೆ ಪ್ರಸಿದ್ಧಿ ಪಡೆಯುತ್ತಿದೆ. ಇವತ್ತು ಬಂಗಾರದ ದರ ಒಂದು ಕಡೆ ಏರಿಕೆಯಾಗುತ್ತಿದೆ. ಜೊತೆಗೆ ಖರ್ಚುವೆಚ್ಚಗಳು ಹೆಚ್ಚಾಗುತ್ತಿದೆ. ಕಂಬಳದ 10ನೇ ವರ್ಷದಲ್ಲಿ ಎಲಿಕ ಜಯರಾಜ್ ಅವರು ಕಂಬಳದಲ್ಲಿ ವಿಜೇತರಿಗೆ ಕೊಡುವ ಚಿನ್ನದ ಪದಕವನ್ನು 2 ಪವನ್ಗೆ ಏರಿಕೆ ಮಾಡಿಸಿದ್ದರು. ಈಗ ಪವನ್ಗೆ ಲೆಕ್ಕ ಹಾಕಿದರೆ ಭಾರಿ ದೊಡ್ಡ ಸಂಗತಿಯಾಗಿದೆ. ಮತ್ತೊಂದು ಕಡೆ ಕರೆಯ ಜವಾಬ್ದಾರಿಯೂ ಕೂಡಾ ನಾವೇ ಮಾಡಬೇಕಾಗಿದೆ. ಹಾಗಾಗಿ ಕಂಬಳದ ಬಳಿಕ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಸಂದರ್ಭ ಹೊಸ ಕರೆ ನಿರ್ಮಾಣ ಮಾಡಲಾಗುವುದು. ಸುಮಾರು 20ಲಕ್ಷ ರೂಪಾಯಿ ವೆಚ್ಚದಲ್ಲಿ ಕರೆ ಮಾಡುವ ವ್ಯವಸ್ಥೆ ಇದೆ. ಇದಕ್ಕೆ ನಮ್ಮ ಶಾಸಕರು ಕೂಡಾ ಸಹಕಾರ ನೀಡಲಿದ್ದಾರೆ. 32 ವರ್ಷದ ಹಿಂದೆ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕೊಡಿಂಬಾಡಿ ದಿವಾಕರ್, ಜಯರಾಜ್ ಸಹಿತ ಹಲವಾರು ಹಿರಿಯರು ಶ್ರಮದಾನದ ಮೂಲಕ ಕಂಬಳದ ಕರೆ ಮಾಡಿಸಿದ್ದರು ಎಂದು ಅವರು ನೆನಪಿಸಿಕೊಂಡರು.
ಕೆಸರುಗದ್ದೆ ಓಟ ಕಂಬಳಕ್ಕೆ ಸಮಸ್ಯೆಯಾಗಿಲ್ಲ:
ಕಳೆದ ಸಲ ಕಂಬಳದ ಜೊತೆಗೆ ಕೆಸರುಗದ್ದೆ ಓಟ ಮಾಡಿದ್ದೆವು. ಅದನ್ನು ಈ ಭಾರಿಯೂ ಮಾಡಲಿಕ್ಕಿದೆ. ಕಳೆದ ಸಲ ಮೊದಲ ಪ್ರಯತ್ನದಲ್ಲೇ ಕೆಸರುಗದ್ದೆ ಓಟ ಯಶಸ್ವಿಯಾಗಿದೆ. ಕಂಬಳಕ್ಕೆ ಇದರಿಂದ ಯಾವುದೆ ಸಮಸ್ಯೆ ಆಗಿಲ್ಲ ಎಂದು ಹೇಳಿದ ಚಂದ್ರಹಾಸ ಶೆಟ್ಟಿಯವರು ಈ ಬಾರಿಯೂ ಇದೆ ಪೂರ್ಣ ಸಹಕಾರ ಬೇಕೆಂದರು.
ಯಾರೆ ಬರಲಿ, ಬಾರದೆ ಇರಲಿ ಪುತ್ತೂರು ಕಂಬಳ ನಿರೀಕ್ಷೆಗೂ ಮೀರಿ ನಡೆಯಲಿದೆ:
ಮಾಜಿ ಮಂತ್ರಿಗಳು ಮತ್ತು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ, ವಿನಯ ಕುಮಾರ್ ಸೊರಕೆ ಅವರು ಮಾತನಾಡಿ, 35 ವರ್ಷದ ಹಿಂದೆ ನಿಂತು ಹೋದ ಕಂಬಳ ಮತ್ತೆ ಜಯಂತ ರೈ ಅವರ ನೇತೃತ್ವದಲ್ಲಿ ಅರಂಂಭಗೊಂಡಿತು. ಅವರ ಯುವಕರ ಆಕರ್ಷಣೆಯ ಶಕ್ತಿಯಿಂದ ಆಗ ಶ್ರಮದಾನದ ಮೂಲಕವೇ ಕರೆ ಮಾಡಲಾಯಿತು. ಶ್ರೀಪತಿ ಆರಿಗ, ಎನ್.ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ಕಂಬಳ ಒಂದಷ್ಟು ಸಮಯ ಕಂಬಳ ನಿಂತು ಹೋಗುತ್ತದೆ ಎಂದಾಗ ಮುತ್ತಪ್ಪ ರೈ ಅವರು ಮತ್ತೆ ಅದಕ್ಕೆ ಬಹಳ ದೊಡ್ಡ ಮೆರುಗು ನೀಡಿದರು. ಅವರ ಬಳಿಕ ಚಂದ್ರಹಾಸ ಶೆಟ್ಟಿಯವರ ನೇತೃತ್ವದಲ್ಲಿ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ನಡೆಯುತ್ತಿರುವಾಗ ಕಂಬಳದ ಕರೆಯನ್ನು ಬದಲಾಯಿಸುವ ಚಿಂತನೆಯೂ ನಡೆದಿದೆ. ಕಟಪಾಡಿ ಬೀಡುವಿನಲ್ಲೂ ನಿರಂತರ ಕಂಬಳ ನಡೆಯುತ್ತಿತ್ತು. ಈ ಬಾರಿ ಅಲ್ಲೂ ಕಟಪಾಡಿಯಿಂದ ಎರ್ಮಾಳುವಿನಲ್ಲಿ ತೆಂಕ ಬಡ ಕಂಬಳ ನಡೆಯಲಿದೆ. ಇವತ್ತು ಕರೆ ಮಾಡಲು ಮರಳಿನ ಸಮಸ್ಯೆಯಿಂದಾಗಿ ಕ್ರಷರ್ ಹುಡಿ ಬಳಸುವ ಕಾಲ ಬಂದಿದೆ. ಹಾಗಾಗಿ ಪುತ್ತೂರಿನ ಕಂಬಳಕ್ಕೆ ಯಾರೆ ಬರಲಿ, ಬಾರದೆ ಇರಲಿ ನಿರೀಕ್ಷೆಗೂ ಮೀರಿ ಇಲ್ಲಿ ನಿರಂತರ ಕಂಬಳ ನಡೆಯಲಿದೆ. ಇದು ರೈತರ ವೀರತ್ವದ ಶಕ್ತಿ. ಕ್ರೀಡೆಗೆ ಒತ್ತು ಕೊಟ್ಟರೆ ಕೃಷಿಗೆ ಒತ್ತು ಕೊಟ್ಟಂತೆ ಎಂದರು.
ಸಮಸ್ಯೆಗೆ ಪರಿಹಾರ ಸಿಕ್ಕಿದೆ:
ಇವತ್ತು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆದಿದೆ. ಅದು ಮುಂದೆ ಶಿವಮೊಗ್ಗದಲ್ಲಿ ನಡೆಯುವ ಯೋಜನೆಯಲ್ಲಿದ್ದಾಗ ಕೋರ್ಟ್ ನಿಂದ ಸ್ಟೇ ಬಂತು. ಕಂಬಳ ನಿಲ್ಲುವ ಸಂದರ್ಭ ಬೃಹತ್ ಪ್ರತಿಭಟನೆ ನಡೆಯಿತು. ಆ ಪ್ರತಿಭಟನೆಯ ಫಲವಾಗಿ ಇವತ್ತು ಸಮಸ್ಯೆಗಳು ಪರಿಹಾರ ಆಗಿದೆ. ಕಂಬಳಕ್ಕೆ ಬೇಕಾಗಿ ಗುಣಪಾಲ್ ಶೆಟ್ಟಿಯವರು ಹಲವು ಅವಿಷ್ಕಾರ ಮಾಡಿದ್ದಾರೆ ಎಂದರು.
ಪುತ್ತೂರು ಕಂಬಳ ಮಹಾಲಿಂಗೇಶ್ವರನ ಸಾನಿದ್ಯದ ಎದುರೇ ನಡೆಯಲಿ:
ಮಾಜಿ ಶಾಸಕರು ಮತ್ತು ಕೋಟಿ ಚೆನ್ನಯ ಕಂಬಳ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಶಕುಂತಳಾ ಟಿ ಶೆಟ್ಟಿ ಅವರು ಮಾತನಾಡಿ, ನಾನು ಕಂಬಳದಲ್ಲಿ ಎನೂ ಅಲ್ಲ. ಆದರೆ ಅಪವಾದಕ್ಕೆ ಉತ್ತರವಾಗಿ ನಾನು ಕಂಬಳದ ಜೊತೆಯಲ್ಲೇ ಇದ್ದೇನೆ ಎಂದ ಅವರು ಬೆಂಗಳೂರು ಕಂಬಳ ಆದ ಬಳಿಕ ವಿಶ್ವದಲ್ಲಿ ಹೆಸರು ಬಂದಿದೆ. ಆದರೆ ಜಿಲ್ಲೆಯಲ್ಲಿ ಅತಿ ದೊಡ್ಡ ಹೆಸರು ಪಡೆಯುವ ಕಂಬಳ ಪುತ್ತೂರು ಕಂಬಳ ಮಾತ್ರ ಎಂದರು. ಪುತ್ತೂರು ಕಂಬಳ ಇದೇ ಕಂಬಳದಲ್ಲಿ ನಡೆಯಬೇಕು. ಯಾಕೆಂದರೆ ಈಗಾಗಲೇ ವಿನಯ ಕುಮಾರ್ ಸೊರಕೆ ಹೇಳಿದಂತೆ ಕಟಪಾಡಿ ಕಂಬಳ ಎರ್ಮಾಳುವಿಗೆ ಹೋಗುವುದು. ಮೂಡುರು ಪಡೂರು ಹೋಗಿ ನಾವೂರು ಆಗುವುದು ಕೇಳಿ ಬಂದಿದೆ. ಹಾಗಾಗಿ ಪುತ್ತೂರಿನ ಕಂಬಳ ಬೇರೆ ಸ್ಥಳಕ್ಕೆ ಹೋಗುವುದಕ್ಕೆ ನಾವು ಜೀವ ಇದ್ದರೂ ಬಿಡುವುದಿಲ್ಲ. ಪುತ್ತೂರು ಕಂಬಳ ಇಲ್ಲೇ ಆಗುವುದಕ್ಕೆ ದೃಢ ನಿಶ್ಚಯ ಬೇಕು. ಯಾಕೆಂದರೆ ಕೊನೆಗೆ ಬಲಿಮೆಯಲ್ಲಿ ಪುತ್ತೂರಿನ ತೆಂಕಿಲದಲ್ಲಿ ಮಾಡುವುದೆಂಬ ವಿಚಾರ ಬರುವುದು ಬೇಡ. ಏನೇ ಇದ್ದರೂ ಮಹಾಲಿಂಗೇಶ್ವರ ದೇವರ ಸಾನಿಧ್ಯದ ಎದುರೇ ಕಂಬಳ ನಡೆಯಬೇಕು. ಈ ನಿಟ್ಟಿನಲ್ಲಿ ನಮಗೆ ಗಟ್ಟಿಯಾದ ಶಾಸಕರಿದ್ದ ಕಾರಣ ನಮಗೆ ಹೆದರಿಕೆಯಿಲ್ಲ ಎಂದರು.
ಕಂಬಳ ದೇವರಿಗೆ ಹತ್ತಿರವಾಗುತ್ತಿದೆ:
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಇವತ್ತು ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭೆ ಪ್ರಥಮವಾಗಿ ದೇವಳದ ನಟರಾಜ ವೇದಿಕೆಯಲ್ಲಿ ನಡೆಯುತ್ತಿದೆ. ಇದು ಕಂಬಳ ದೇವರಿಗೆ ಬಹಳ ಹತ್ತಿರವಾಗುತ್ತಿರುವ ಸೂಚನೆ ನೀಡಿದಂತಾಗಿದೆ. ಕಂಬಳದಲ್ಲಿ ಅತ್ಯಂತ ಉದ್ದದ ಕರೆ, ಹೆಚ್ಚು ಕಾರ್ಯಕರ್ತರು, ಸ್ಪರ್ಧೆಯಲ್ಲಿ ಭಾಗವಹಿಸುವಲ್ಲೂ ಹೆಚ್ಚು ಕೋಣಗಳು ನಮ್ಮ ಕೋಟಿ ಚೆನ್ನಯ ಜೋಡುಕರೆ ಕಂಬಳವಾಗಿದೆ. ಬಹಳ ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲಿ ಆಗುತ್ತಿದೆ. ಕಂಬಳದ ಗದ್ದೆಯಲ್ಲಿ ಕೋಣಗಳಿಗೆ ನೀರು ಹಾಯಿಸಲು ಮತ್ತು ಕರೆಗೆ ನೀರು ಬಿಡಲು ಪ್ರತ್ಯೇಕ ಬೋರ್ವೆಲ್ ವ್ಯವಸ್ಥೆ ಮಾಡಲಾಗಿದೆ. ಕಂಬಳದ ಆರಂಭದಿಂದ ಕೊನೆಯ ತನಕ ಕಾರ್ಯಕರ್ತರು ಸಹಕರಿಸಬೇಕು. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಕಂಬಳ ಸಂಪೂರ್ಣ ಯಶಸ್ವಿಯಾಗಿ ನಡೆಯಲಿದೆ ಎಂದರು.
ದ.ಕ. ಉಡುಪಿ ಜಿಲ್ಲೆಯಲ್ಲೇ ಹೆಸರು ಪಡೆದ ಕಂಬಳ:
ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ವಸಂತ ಕುಮಾರ್ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 32 ವರ್ಷಗಳಿಂದ ಪುತ್ತೂರಿನ ಕೋಟಿ ಚೆನ್ನಯ ಜೋಡುಕರೆ ಕಂಬಳ ಪ್ರಸಿದ್ಧಿ ಪಡೆದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಂಬಳ ಹೆಸರು ಪಡೆದಿದೆ ಎಂದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಲ್ವರು ಸಾಧಕರಿಗೆ ಸನ್ಮಾನ:
ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಗೊಂಡ ಕಂಬಳ ಕ್ಷೇತ್ರದ ಸಾಧನೆಗೆ ಸಂಬಂಧಿಸಿ ಸಮಿತಿ ಉಪಾಧ್ಯಕ್ಷ ಸುದರ್ಶನ ನಾಯ್ಕ್ ಕಂಪ, ಅಬೂಬಕರ್ ಮುಲಾರ್, ನಿರೂಪಕರಾಗಿರುವ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ದೈವರಾಧನೆಯ ಮದ್ಯಸ್ಥ ಬಾಲಕೃಷ್ಣ ಬೂಡಿಯಾರ್ ಅವರನ್ನು ಕಂಬಳ ಸಮಿತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಸುದರ್ಶನ್ ನಾಯ್ಕ್ ಕಂಪ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಕಂಬಳ ಸಮಿತ ಉಪಾಧ್ಯಕ್ಷ ಶಿವರಾಮ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ ವಿ ಅತಿಥಿಗಳನ್ನು ಗೌರವಿಸಿದರು. ಬಾಲಕೃಷ್ಣ ಪಳ್ಳತ್ತಾರು ಮತ್ತು ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಮಾಣಿ ಉಮೇಶ್ ಸಾಗು, ಕಬಡ್ಡಿ ಕ್ರೀಡಾಪಟುಗಳಾದಪ್ರಶಾಂತ್ ರೈ ಕೈಕಾರ, ಅಜಿತ್, ಸಮಿತಿ ಪದಾಧಿಕಾರಿಗಳಾದ ಜೋಕಿಂ ಡಿಸೋಜಾ,ಜಿನ್ನಪ್ಪ ಪೂಜಾರಿಮುರ, ಶಶಿಕಿರಣ್ ರೈ ನೂಜಿಬೈಲು, ದುರ್ಗಾ ಪ್ರಸಾದ್ ರೈ ಕುಂಬ್ರ, ದಿನೇಶ್ ವಲೇರಿಯನ್ ಡಯಾಸ್, ರೋಷನ್ ರೈ ಬನ್ನೂರು,ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅಬೂಬಕ್ಕರ್ ಮುಳಾರ್, ವಿಕ್ರಂ ಶೆಟ್ಟಿ ಅಂತರ,ಶಿವಪ್ರಸಾದ್ ರೈ ಮಟಂತಬೆಟ್ಟು, ಮುರಳಿಧರ ರೈ ಮಟಂತಬೆಟ್ಟು, ರಂಜಿತ್ ಬಂಗೇರ, ಪನಡ್ಕ ಗಂಗಾಧರ ಶೆಟ್ಟಿ ಪ್ರಶಾಂತ್ ಮುರ, ಕೈಕಾರ, ದಿಲೀಪ್ ಶೆಟ್ಟಿ ಕೈಕಾರ ಡಾ.ರಾಜಾರಾಮ ಉಪ್ಪಿನಂಗಡಿ, ಸುಮಿತ್ ಶೆಟ್ಟಿ ಕಂಬಳಬೆಟ್ಟು, ಕೆ ಸತೀಶ್ ಕುಮಾರ್, ಪ್ರಶಾಂತ್ ಮುರ, ರಾಕೇಶ್ ರೈ ಬೋಲೋಡಿ ಗುತ್ತು, ಪ್ರಶಾಂತ್ ರೈ ಕೈಕಾರ, ದಾಮೋದರ ಮುರ, ಜೆ.ಪಿ. ಸಂತೋಷ್ ಕುಮಾರ್, ಚಂದ್ರಶೇಖರ ಪಾಲ್ತಾಡಿ, ಪ್ರಹಾದ್ ಬೆಳ್ಳಿ ಪಾಡಿ, ಗಗನ್ ದೀಪ್, ಪ್ರವೀಣ್ ಕುಂಜಾರ್, ಸುದೇಶ್ ನ್ಯಾಕ್, ಉಮೇಶ್ ಕರ್ಕೆರ,ಪ್ರವೀಣ್ ಕುಮಾರ್, ನವೀನ್ ಚಂದ್ರನ್ಯಾಕ್ ಬೆದ್ರಾಳ, ಹಂಝಾ ಎಲಿಯ, ಶರತ್ ಕೇಪುಳು, ಚಂದ್ರಹಾಸ ಶೆಟ್ಟಿ ಬನ್ನೂರು,ಜಯಪ್ರಕಾಶ್ ಬದಿ ನಾರ್, ರಾಜೇಶ್ ಶೆಟ್ಟಿ,ಮಟಂ ತಬೆಟ್ಟು,ಸುಶಾಂತ್ ಶೆಟ್ಟಿ ಕಂಬಳಬೆಟ್ಟು, ಕೆ ಸುಂದರ, ಕಿರಣ್ ಡಿಸೋಜ, ಯೋಗೀಶ್ ಸಾಮಾನಿ, ರಾಕೇಶ್ ಶೆಟ್ಟಿ,ರಮೇಶ್ ಗೌಡ,ಉಮಾಶಂಕರ್ ನ್ಯಾಕ್ ಪಾಂಗಳಾಯಿ, ಮುಹಮ್ಮದ್ ಬಡಗನ್ನೂರು, ಮೌರಿಸ್ ಮಸ್ಕರೇನಸ್,ಕಿಶಾನ್ ಸರೋಳಿ, ಖಾದರ್ ಪೋಳ್ಯ, ಹಸೈನಾರ್ ಬನಾರಿ, ಮಹಾಬಲ ರೈ ಒಳತಡ್ಕ, ವಿನಯ ಸುವರ್ಣ, ಸನತ್ ರೈ ಒಳತಡ್ಕ, ಅಭಿಷೇಕ್ ಬೆಳ್ಳಿ ಪಾಡಿ, ಸುರೇಂದ್ರ ರೈ ನೇಸಾರ, ದಾಮೋದರ,ಬಾಲಕೃಷ್ಣ, ಗಣೇಶ್ ರಾಜ್ ಬಿಳಿಯೂರು, ಪ್ರವೀಣ್ ಶೆಟ್ಟಿ ಅಳಕೆಮಜಾಲ್, ರಜಾಕ್ ಬಿ ಎಚ್, ಬಿಪಿನ್ ಕುಮಾರ್ ಶೆಟ್ಟಿ ಮೊದಲಾದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ಈ ಬಾರಿ ಕಂಬಳದ ಕೆಸರುಗದ್ದೆ ಓಟದಲ್ಲಿ ರಿಲೇ ಪ್ರಯೋಗ !
ಕಳೆದ ಬಾರಿ ಕಂಬಳದ ಗದ್ದೆಯಲ್ಲಿ ಕೆಸರುಗದ್ದೆ ಓಟ ಪ್ರಥಮ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ನೂರಾರು ಮಂದಿ ಕ್ರೀಡಾಪಟುಗಳ ಜೊತೆಗೆ 29 ಮಂದಿ ರಾಷ್ಟ್ರೀಯ ಕ್ರೀಡಾಪಟುಗಳು ಕೂಡಾ ಭಾಗವಹಿಸಿದ್ದರು. 11 ರೇಸ್ ಅನ್ನು 11 ನಿಮಿಷದಲ್ಲಿ ಮುಗಿಸಿದ್ದೆವು. ಅದೆ ರೀತಿ ಕಂಬಳದ ಕೆಸರುಗದ್ದೆ ಓಟದಲ್ಲಿ ಈ ಬಾರಿ ರಿಲೇ ಪ್ರಯೋಗ ಮಾಡುವುದು ಉತ್ತಮ. ಇದು ತುಂಬಾ ಆಕರ್ಷಣಿಯವಾಗಿರುತ್ತದೆ. 50 ತಂಡ ಮಾಡಿಕೊಂಡು ಮಾಡಬಹುದು. ರಾಜ್ಯದಲ್ಲಿ 16 ಸ್ಪೋರ್ಟ್ಸ್ ಹಾಸ್ಟೇಲ್ ಇದೆ. ಅದಕ್ಕೆ ಕಂಬಳ ಸಮಿತಿಯಿಂದ ಪತ್ರ ಬರೆದರೆ ಅಲ್ಲಿಂದ ಸ್ಪರ್ಧಿಗಳು ಭಾಗವಹಿಸಬಹುದು. ಕೆಸರು ಗದ್ದೆ ಓಟದಿಂದ ಕಂಬಳಕ್ಕೆ ತೊಡಕಾಗಿಲ್ಲ. ಹಾಗಾಗಿ ಅವಕಾಶ ಕೊಟ್ಟರೆ ಈ ಬಾರಿ ರಿಲೇ ಮಾಡುವ.
ಪ್ರವೀಣ್, ದೈಹಿಕ ಶಿಕ್ಷಣ ನಿದೇರ್ಶಕ ಉಪ್ಪಿನಗಂಡಿ ಕಾಲೇಜು
ಸರಕಾರದಿಂದ ರೂ. 5ಲಕ್ಷ -ಶಾಸಕರಿಗೆ ಅಭಿನಂದನೆ
ಶಾಸಕ ಅಶೋಕ್ ಕುಮಾರ್ ರೈ ಅವರ ಮುತುವರ್ಜಿಯಲ್ಲಿ ಸುಮಾರು 10 ಕಂಬಳ ಸಮಿತಿಗೆ ತಲಾ ರೂ. 5ಲಕ್ಷವನ್ನು ಸರಕಾರದಿಂದ ಸಿಗಲಿದೆ. ಈ ಕುರಿತು ಶಾಸಕರ ಈ ಪ್ರಯತ್ನವನ್ನು ಎಲ್ಲಾ ಕಂಬಳ ಸಮಿತಿಯವರು ಅಭಿನಂದಿಸಬೇಕು.
ಎನ್ ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ