- ಅಮರ್ ಜವಾನ್ ಜ್ಯೋತಿ ಸ್ಮಾರಕ ಸೈನಿಕರ ಪಾಲಿಗೆ ದೇವಸ್ಥಾನ: ಬ್ರಿಗೇಡಿಯರ್ ಐ.ಎನ್.ರೈ
ಪುತ್ತೂರು: ಸಾವು ಬದುಕು ಯಾರ ಕೈಯಲ್ಲೂ ಅಡಗಿಲ್ಲ. ಬಸ್ನ ಅಡಿಗೆ ಬಿದ್ದೂ ಸಾಯುವವರಿದ್ದಾರೆ. ದೇಶ ರಕ್ಷಣೆಗಾಗಿ ಎದೆಯೊಡ್ಡಿ ಅಸುನೀಗಿ ರಾಷ್ಟ್ರಧ್ವಜವನ್ನು ಹೊದ್ದುಕೊಳ್ಳುವ ಸೈನಿಕರೂ ಇದ್ದಾರೆ. ಆದರೆ ಯಾವ ಸಾವು ಶ್ರೇಷ್ಟ ಎಂದು ನಾವು ನಿರ್ಣಯಿಸಬೇಕಿದೆ. ಸೈನಿಕನ ಮರಣ ಉತ್ಕೃಷ್ಟ ಎನಿಸುವುದು ಆತ ಒಂದು ಉನ್ನತ ಉದ್ದೇಶಕ್ಕಾಗಿ ಹಾಗೂ ತಾಯ್ನಾಡಿಗಾಗಿ ಬದುಕನ್ನು ಅರ್ಪಿಸಿದ್ದಾನೆ ಎನ್ನುವ ಕಾರಣದಿಂದ ಎಂಬುದನ್ನು ಗುರುತಿಸಬೇಕು ಎಂದು ಮಂಗಳೂರಿನ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಹೇಳಿದರು. ನಗರದ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅನ್ಯಾನ್ಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ 1971ರ ಪಾಕಿಸ್ಥಾನದ ವಿರುದ್ಧದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತ ಜಯಗಳಿಸಿ ಐವತ್ತು ವರ್ಷವಾದ ನೆಲೆಯಲ್ಲಿ ಭಾನುವಾರ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ವಿಜಯ ದಿವಸ ಆಚರಣೆ – ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವೊಂದು ಯುದ್ಧ ತಾಣಗಳಲ್ಲಿ ಮೈನಸ್ 39 ಡಿಗ್ರಿಯಷ್ಟು ಕಡಿಮೆ ತಾಪಮಾನವಿರುತ್ತದೆ. ಉಸಿರಾಡುವುದಕ್ಕೂ ಕಷ್ಟಕರವಾದ ಪ್ರದೇಶಗಳಲ್ಲಿ ಶತ್ರುಗಳ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ. ಆದರೂ ಸೈನಿಕನಾಗುವುದು ಬಹುದೊಡ್ಡ ಹೆಮ್ಮೆಯ ವಿಚಾರ ಎಂದರವರು, ನಾವು ಯಾವುದೇ ಕ್ಷೇತ್ರದಲ್ಲಿರಲಿ, ನಮ್ಮ ಹೆತ್ತವರು ನಮ್ಮ ಬಗ್ಗೆ ಹೆಮ್ಮೆಯಿಂದ ಕಣ್ಣೀರು ಸುರಿಸುವಂತಾದರೆ ಬದುಕು ಸಾರ್ಥಕ ಎಂದರು. ಅಮರ್ ಜವಾನ್ ಜ್ಯೋತಿ ಸ್ಮಾರಕ ಸೈನಿಕರ ಪಾಲಿಗೆ ದೇವಸ್ಥಾನವಿದ್ದಂತೆ. ಇಂತಹ ಪವಿತ್ರ ಕಾರ್ಯವನ್ನು ಪುತ್ತೂರಿನಲ್ಲಿ ಸಾಕಾರಗೊಳಿಸಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯ ಮಹತ್ವದ್ದು ಎಂದು ಅವರು ಶ್ಲಾಸಿದರು.
ವಿಜಯ ದಿನದ ಆಚರಣೆ ಸ್ತುತ್ಯರ್ಹ: ಶಾಸಕ ಸಂಜೀವ ಮಠಂದೂರು ಮಾತನಾಡಿ ಸೈನಿಕನಿಗೆ ಗೌರವ ಸಲ್ಲಿಸುವುದೆಂದರೆ ದೇಶಕ್ಕೆ ಗೌರವ ಸಲ್ಲಿಸಿದಂತೆ. 1971ರ ಯುದ್ಧದ ಸಂದರ್ಭದಲ್ಲಿ ಇಡೀ ದೇಶವೇ ಸರ್ಕಾರಕ್ಕೆ ಬೆಂಬಲ ನೀಡಿತ್ತು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹೊಗಳಿ, ಮಾದರಿ ವಿಪಕ್ಷ ನಾಯಕನಾಗಿ ಕಾಣಿಸಿಕೊಂಡಿದ್ದರು. ಆ ಯುದ್ಧದ ಗೆಲುವಿಗೆ ಐವತ್ತರ ಸಂಭ್ರಮ ಇದೀಗ ಒದಗಿ ಬಂದಿದ್ದು, ಇಂತಹ ವಿಜಯ ದಿನದ ಆಚರಣೆ ಸ್ತುತ್ಯರ್ಹ ಎಂದು ಹೇಳಿದರು.
ಎಳೆಯ ವಯಸ್ಸಿನಲ್ಲಿಯೇ ದೇಶಪ್ರೇಮ ಒಡಮೂಡಬೇಕು: ಮಂಗಳೂರಿನ ನಿವೃತ್ತ ಕರ್ನಲ್ ಎನ್. ಶರತ್ ಭಂಡಾರಿ ಮಾತನಾಡಿ ಎಳೆಯ ವಯಸ್ಸಿನಲ್ಲಿಯೇ ದೇಶಪ್ರೇಮ ಒಡಮೂಡಬೇಕು. ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವುದು ಹೇಗೆ ದೇಶಪ್ರೇಮವೋ ಹಾಗೆಯೇ ನಮ್ಮ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡುವುದೂ ದೇಶಪ್ರೇಮವೇ. ಗಿಡ ಬೆಳೆಸುವುದು, ಸ್ವಚ್ಚತೆ ಕಾಪಾಡುವುದೇ ಮೊದಲಾದ ಕಾರ್ಯಗಳು ದೇಶಪ್ರೇಮವೇ ಆಗಿವೆ ಎಂದರು. ಪುತ್ತೂರಿನ ಸಹಾಯಕ ಆಯುಕ್ತ ಡಾ| ಯತೀಶ್ ಉಲ್ಲಾಳ್ ಶುಭಾಶಂಸನೆಗೈದರು. ಮಾಜಿ ಸೈನಿಕರ ಸಂಘದ ಸದಸ್ಯ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಜಿ.ಡಿ.ಭಟ್ ಅಧ್ಯಕ್ಷತೆ ವಹಿಸಿ ಯುದ್ಧ ಹಾಗೂ ಸೈನ್ಯದ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ 1971ರಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಬ್ರಿಗೇಡಿಯರ್ ಐ.ಎನ್ ರೈ, ಕರ್ನಲ್ ಎನ್.ಶರತ್ ಭಂಡಾರಿ ಹಾಗೂ ಪುತ್ತೂರಿನ ನಿವೃತ್ತ ವೀರ ಯೋಧರಾದ ಲೆಫ್ಟಿನೆಂಟ್ ಕರ್ನಲ್ ಜಿ.ಡಿ.ಭಟ್, ಕ್ಯಾಪ್ಟನ್ ಚಿದಾನಂದ ನಾಡಾಜೆ, ಸುಬೇದಾರ್ ರಮೇಶ್ ಬಾಬು ಪಿ, ವಾರಂಟ್ ಆಫೀಸರ್ ಜೆ.ಕೆ.ವಸಂತ, ಸಾರ್ಜೆಂಟ್ ದೇರಣ್ಣ ಗೌಡ, ನಾಯಕ್ ಶಿವಪ್ಪ ಗೌಡ, ನಾಯಕ್ ಜೋ ಡಿಸೋಜ, ಎಲ್ಎಂಇ ಸುಬ್ರಹ್ಮಣ್ಯ ಕೆಮ್ಮಿಂಜೆ, ಸಿಪಾಯಿ ಅಮಣ್ಣ ರೈ ಡಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪುತ್ತೂರಿನಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರ್ಮಿಸಲಾಗಿರುವ ಅಮರ್ ಜವಾನ್ ಜ್ಯೋತಿ ಸ್ಮಾರಕವನ್ನು ಸಂಸ್ಥೆಯ ವತಿಯಿಂದ ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉದ್ಯೋಗಿ ರವಿಚಂದ್ರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಚಂದ್ರನ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯರಾದ ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನಿವೃತ್ತ ಡಿಎಸ್ಪಿ ರಾಮದಾಸ ಗೌಡ, ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ|ವಿನಾಯಕ ಭಟ್ಟ ಗಾಳಿಮನೆ, ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಪ್ರಾಚಾರ್ಯೆ ಮಾಲತಿ ಡಿ, ಪುತ್ತೂರಿನ ಮಾಜಿ ಸೈನಿಕರು, ನಾಗರಿಕರು, ಸರ್ಕಾರಿ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಅಂಬಿಕಾ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು, ನರಿಮೊಗರಿನ ಸಾಂದೀಪನಿ ಗ್ರಾಮಿಣ ವಿದ್ಯಾಸಂಸ್ಥೆ ಹಾಗೂ ಸುದಾನ ವಿದ್ಯಾಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಪುತ್ತೂರು ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಎ.ಜೆ.ರೈ ವಂದಿಸಿದರು. ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಎಂ.ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದವರೆಲ್ಲರೂ ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರಯೋಧರಿಗೆ ಪುಷ್ಪನಮನ ಸಲ್ಲಿಸಿದರು.