ಪುತ್ತೂರು: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಬಿಳಿಯೂರಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ರಿಕ್ಷಾ ಹಾಗೂ ಕಳ್ಳತನ ಮಾಡಿದ್ದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಬಡವು ಶೀನಪ್ಪ ಪೂಜಾರಿಯವರ ಮಗ ವಿನಯ ಕುಮಾರ್(೩೧ವ.)ಹಾಗೂ ಚಿಕ್ಕಮುಡ್ನೂರು ಕೆಮ್ಮಾಯಿ ಜಂಕ್ಷನ್ ಸವೇಝ್ ಕಾಟೇಜ್ನ ೩ನೇ ಮನೆ ಮಹಮ್ಮದ್ ರಫೀಕ್ ಎಂಬವರ ಮಗ ಮಹಮ್ಮದ್ ಜುನೈದ್(೨೪ವ.)ಬಂಧಿತ ಆರೋಪಿಗಳು.ಬಿಳಿಯೂರು ಗ್ರಾಮದ ನೇಂಜ ಮನೆ ಆನಂದ ದೇವಾಡಿಗ ಎಂಬವರ ಮಗ ವಸಂತ ದೇವಾಡಿಗ ಎಂಬವರು ತನ್ನ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಯಾರೋ ಕಳ್ಳರು ಜ.೧೧ರ ರಾತ್ರಿ ಸಮಯ ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಕುರಿತು ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಜ.೧೯ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಜಂಕ್ಷನ್ ಬಳಿ ರಿಕ್ಷಾದಲ್ಲಿದ್ದ ಆರೋಪಿಗಳಾದ ವಿನಯ ಕುಮಾರ್ ಹಾಗೂ ಮಹಮ್ಮದ್ ಜುನೈದ್ರನ್ನು ದಸ್ತಗಿರಿ ಮಾಡಿ ಆಟೋ ರಿಕ್ಷಾ ಮತ್ತು ಕಳ್ಳತನ ಮಾಡಿದ್ದ ಅಡಿಕೆಯನ್ನು ಸ್ವಾಧೀನಪಡಿಸಿ ಪ್ರಕರಣ ಪತ್ತೆ ಮಾಡಲಾಗಿರುತ್ತದೆ ಎಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.