ಮಳೆ ನೀರು ಹೋಗಲು ರಸ್ತೆ ಬದಿ ಮಾಡಿದ ಕಣಿ ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ!
ಮಳೆ ನೀರು ಚರಂಡಿಗೆ ಹೋಗಲು ರಸ್ತೆ ಬದಿ ಮಾಡಿದ ಕಣಿ ವಾಹನ ಅಪಘಾತಕ್ಕೆ ಕಾರಣವಾಗುತ್ತಿರುವ ಘಟನೆ ನಡೆಯುತ್ತಿದೆ.
ರಸ್ತೆಯಲ್ಲಿ ಹೋಗುವ ಮಳೆನೀರು ಚರಂಡಿಗೆ ಹೋಗುವಂತೆ ಮಾಡಲು ಹಿಟಾಚಿ ವಾಹನದ ಮೂಲಕ ರಸ್ತೆ ಬದಿ ಕಣಿಗಳನ್ನು ತೆಗೆಯಲಾಗಿದೆ. ಕೆಲವೊಂದು ತಿರುವುಗಳಲ್ಲಿಯೂ ಈ ಕಣಿಗಳು ಇರುವುದರಿಂದ ವಾಹನ ಚಾಲಕರಿಗೆ ಎದುರಿನಿಂದ ಬರುವ ವಾಹನಗಳಿಗೆ ಸೈಡ್ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಣಿಯ ಒಂದು ಬದಿಯ ಮಣ್ಣು ಎತ್ತರವಾಗಿರುವುದರಿಂದ ವಾಹನಗಳನ್ನು ಅದರ ಮೇಲೆ ಹತ್ತಿಸಿ ಕೊಂಡೊಯ್ಯುವಂತಹ ಪರಿಸ್ಥಿತಿ ಇಲ್ಲ. ಮತ್ತು ಮಳೆ ನೀರು ಹರಿದುದರಿಂದ ರಸ್ತೆ ಬದಿ ಕೊರೆತ ಉಂಟಾಗಿ ಹೊಂಡಗಳು ನಿರ್ಮಾಣಗೊಂಡಿರುವುದು ಇನ್ನೊಂದು ಕಾರಣವಾಗಿದೆ.
ಇದೇ ಕಾರಣದಿಂದ ಇಂದು ಬೆಳಿಗ್ಗೆ ದೊಡ್ಡತೋಟ ಮರ್ಕಂಜ ರಸ್ತೆಯಲ್ಲಿ ದೊಡ್ಡತೋಟ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಬೆಟ್ಟ ಎಂಬಲ್ಲಿ ತಿರುವಿನಲ್ಲಿ ಸರಕಾರಿ ಬಸ್ಸನ್ನು ಚಾಲಕ ನಿಯಂತ್ರಿಸದ ಪರಿಣಾಮ ಕಾರಿಗೆ ಢಿಕ್ಕಿ ಹೊಡೆದ ಘಟನೆಯೂ ನಡೆದಿದೆ. ಘಟನೆಯಿಂದ ಕಾರಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.