ಪುತ್ತೂರು: ಅಪ್ರಾಪ್ತೆಯನ್ನು ಅತ್ಯಾಚಾರಗೈದ ಆರೋಪಿಯನ್ನು ದೋಷಮುಕ್ತಗೊಳಿಸಿ ಪುತ್ತೂರು ನ್ಯಾಯಾಲಯ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ಆನೆಗಲ್ ತಾಲೂಕಿನ ಮಹೇಶ್ ನಾಗನ್ನವರ್ ದೋಷಮುಕ್ತಗೊಂಡವರು. ದಿನಾಂಕ 13-9-2015ರಂದು ಅಪ್ರಾಪ್ತ ಬಾಲಕಿ ಮತ್ತು ಅವರ ಮನೆಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿರುವುದನ್ನು ತಿಳಿದುಕೊಂಡು ಸುಬ್ರಹ್ಮಣ್ಯಕ್ಕೆ ಬಂದು ದೇವಸ್ಥಾನದ ರಥಬೀದಿ ಜಂಕ್ಷನ್ ಬಳಿಯಲ್ಲಿ ಇದ್ದಾಗ ಬಾಲಕಿಯನ್ನು ಎಲ್ಲಿಗಾದರೂ ಹೋಗಿ ಮದುವೆಯಾಗುವ ಎಂದು ಪುಸಲಾಯಿಸಿ ರಾತ್ರಿ ಸುಮಾರು 9.30 ಗಂಟೆಗೆ ಬಾಲಕಿಯನ್ನು ಅಪಹರಿಸಿಕೊಂಡು ಮಹೇಶ್ ನಾಗನ್ನವರ್ ಅವರ ಮನೆಯಾದ ಹಾವೇರಿ ಜಿಲ್ಲೆಯ ಆನೆಗಲ್ ತಾಲೂಕಿನ ಹರಳೇಶ್ವರ ಎಂಬಲ್ಲಿ ಕರೆದುಕೊಂಡು ಹೋಗಿ ಅಪ್ರಾಪ್ತೆಯೆಂದು ತಿಳಿದಿದ್ದರೂ ಆಕೆಯ ಇಚ್ಚೆಯ ವಿರುದ್ಧವಾಗಿ ಬಲವಂತವಾಗಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಿ.ಎಸ್. ಸತೀಶ್ ಅವರು ಕೇಸ್ ದಾಖಲಿಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲರಾದ ದೇವಾನಂದ ಕೆ, ಚಿನ್ಮಯ್ ರೈ ಮತ್ತು ಹರಿಣಿ ವಾದಿಸಿದ್ದರು.