ಪುತ್ತೂರು: ರಂಗಕಲಾ ವೇದಿಕೆ, ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಕೆಂಗೇರಿ ಬೆಂಗಳೂರು ಇವರು ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಕಲಾವಿದರಿಗೆ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ನಾಡಿನ ಪ್ರಖ್ಯಾತ ಗಾಯಕರು ಮತ್ತು ಗಾನಸಿರಿ ಕಲಾಕೇಂದ್ರದ ಸಾರಥಿ ಡಾ. ಕಿರಣ್ ಕುಮಾರ್ ಗಾನಸಿರಿ ಆಯ್ಕೆಯಾಗಿರುತ್ತಾರೆ. ಸಂಸ್ಥೆಯು ಸುಗಮ ಸಂಗೀತ ಕ್ಷೇತ್ರದ ವಿಶೇಷ ಸಾಧನೆಗಾಗಿ ಕಿರಣ್ ಕುಮಾರ್ ರಿಗೆ ಸುಗಮ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಕಳೆದ 20 ವರ್ಷಗಳಲ್ಲಿ ದಾಖಲೆಯ 21 ಸಾವಿರ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಿರುವ ನಮ್ಮೂರಿನ ಖ್ಯಾತ ಸಂಗೀತಗಾರರು ಮತ್ತು ಸಂಗೀತ ಗುರುಗಳಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಲಭಿಸುತ್ತಿದೆ.
ಗಾನ ಸಿರಿಯ ಕಿರಣ್ ಕುಮಾರ್ ಅವರ ಶಿಷ್ಯೆ ಮತ್ತು ಸಂಸ್ಥೆಯ ಸಹಶಿಕ್ಷಕಿ ಕುಮಾರಿ ಶ್ರೀ ಲಕ್ಷ್ಮಿ ಎಸ್ ಪುತ್ತೂರು ಇವರನ್ನು ರಾಜ್ಯ ಮಟ್ಟದ ಗಾನ ಕಲಾ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ. ಕಳೆದ 15 ವರ್ಷಗಳಿಂದ ಗಾನಸಿರಿಯ ವಿಧೇಯ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಸಂಸ್ಥೆಯಲ್ಲಿ ಸಹಶಿಕ್ಷಕಿಯಾಗಿ ನೂರಾರು ವಿದ್ಯಾರ್ಥಿಗಳಿಗೆ ತನ್ನ ಗುರುಗಳೊಂದಿಗೆ ಗಾಯನ ತರಬೇತಿ ನೀಡುತ್ತಿದ್ದು ಗಾನಸಿರಿಯ ಗಾಯನ ತಂಡದ ಪ್ರಮುಖ ಗಾಯಕಿಯಾಗಿದ್ದುಕೊಂಡು ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುತ್ತಾರೆ…ಇಂದು ಸಾಯಂಕಾಲ ಮೈಲಸಂದ್ರ, ಕೆಂಗೇರಿಯ ಶ್ರೀ ಸೀತಾರಾಮ ಕಪೀಶ್ವರ ಆಂಜನೇಯ ಸ್ವಾಮಿ ಮಂದಿರದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈರ್ವರೂ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ… ಇದೇ ಸಂದರ್ಭದಲ್ಲಿ ಗಾನಸಿರಿ ಗಾಯನ ತಂಡದಿಂದ ತಂಡದಿಂದ ಭಾವಗೀತೆಗಳ ಕಾರ್ಯಕ್ರಮ ಸುಮಧುರ ಗಾನ ಲಹರಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ . ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಲನಚಿತ್ರರಂಗದ ಮತ್ತು ಕಿರುತೆರೆಯ ಹಿರಿಯ ನಟ ನಟಿಯರು , ನಿರ್ದೇಶಕರುಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ.