- ಅಡಿಕೆ ಬೆಳೆಗಾರರು ಆತಂಕಗೊಳ್ಳಬೇಡಿ-ಎ. ಕಿಶೋರ್ ಕುಮಾರ್ ಕೊಡ್ಗಿ
ಕಡಬ: ಬೆಲೆ ಕುಸಿತದ ಬಗ್ಗೆ ಅಡಿಕೆ ಬೆಳೆಗಾರರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅವರು ಜೂ.೩ರಂದು ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘ ಇದರ ಸಹಯೋಗದೊಂದಿಗೆ ಕೆಂಜಾಳ ಶಾಖೆಯಲ್ಲಿ ಕ್ಯಾಂಪ್ಕೋ ವತಿಯಿಂದ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು, ಮಾರುಕಟ್ಟೆಯಲ್ಲಿ ದರ ಏರಿಳಿತ ಆಗುತ್ತಿದೆ, ಆದರೆ ಕ್ಯಾಂಪ್ಕೋ ಸಂಸ್ಥೆಯಿಂದ ಅಡಿಕೆಗೆ ದರ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ಈಗಾಗಲೇ ಬರ್ಮಾದಿಂದ ಅಡಿಕೆ ಬರುತ್ತಿದೆ, ಮಲೆಷ್ಯಾದಿಂದ ಅಡಿಕೆ ಬರುತ್ತಿದೆ, ಅಡಿಕೆಯ ದರ ಕುಸಿಯಲಿದೆ ಎಂದೆಲ್ಲ ಪ್ರಚಾರಗಳು ನಡೆಯುತ್ತಿದೆ, ಆದರೆ ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ದೃತಿಗೆಡಬಾರದು, ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಡೆ ಅವರು ಕೂಡ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದಾರೆ, ಅಡಿಕೆಯ ಆಮದು ನ ವಿಚಾರವಾಗಲಿ, ಅಡಿಕೆ ಕಳ್ಳ ಸಾಗಾಣೆಯ ಮೂಲಕ ಭಾರತಕ್ಕೆ ಬರುವ ವಿಚಾರದ ಬಗ್ಗೆ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕ್ಯಾಂಪ್ಕೋ ಮಾಡುತ್ತಲೇ ಬಂದಿದೆ, ರೈತರು ಕೂಡ ತಮ್ಮ ಅಡಿಕೆಯನ್ನು ರೈತರ ಹಿತ ಕಾಯುವ ಕ್ಯಾಂಪ್ಕೋ ಸಂಸ್ಥೆಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಬಿಳಿನೆಲೆ ಸಿ.ಎ. ಬ್ಯಾಂಕಿನ ಅಧ್ಯಕ್ಷ ದಾಮೋದರ ಗುಂಡ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಕ್ಯಾಂಪ್ಕೋದ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗ, ಕ್ಯಾಂಪ್ಕೋದ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಎಂ. ಮಹೇಶ್ ಚೌಟ, ರಾಘವೇಂದ್ರ ಭಟ್, ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ, ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಪ್ರಗತಿಪರ ಕೃಷಿಕ ಶಿವಪ್ರಸಾದ್ ಕಲ್ಲರ್ತನೆ ಮಾತನಾಡಿದರು. ವೇದಿಕೆಯಲ್ಲಿ ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಸುಶೀಲ, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಎ.ಪಿ.ಎಂ.ಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಬಿಳಿನೆಲೆ ಸಿ.ಎ. ಬ್ಯಾಂಕ್ನ ಮಾಜಿ ನಿರ್ದೇಶಕ ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಗತಿಪರ ಕೃಷಿಕ ಕಾಪಾರು ಆದಿಮನೆ ಪುರುಷೋತ್ತಮ, ಬಿಳಿನೆಲೆ ಸಿ.ಎ. ಬ್ಯಾಂಕ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಾತ ಬಿ. ಅವರುಗಳು ಉಪಸ್ಥಿತರಿದ್ದರು. ಬಿಳಿನೆಲೆ ಸಿ.ಎ ಬ್ಯಾಂಕಿನ ಉಪಾಧ್ಯಕ್ಷ ವೆಂಕಟ್ರಮಣ ಬೈಲು ಅವರು ಸ್ವಾಗತಿಸಿದರು, ನಿರ್ದೇಶಕ ಚಿದಾನಂದ ಗೌಡ ದೇವುಪಾಲ್ ಅವರು ವಂದಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು. ಕು| ಅನ್ವಿತಾ ಪ್ರಾರ್ಥನೆ ಹಾಡಿದರು. ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.