- ಕಾಂಚನ ಕ್ರಾಸ್ನಲ್ಲಿ ಹೆದ್ದಾರಿಯಲ್ಲಿಯೇ ನಿಂತ ಮಳೆ ನೀರು; ವಾಹನ ಸವಾರರ ಪರದಾಟ
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವಾಂತರದಿಂದಾಗಿ ನೀರಕಟ್ಟೆ ಸಮೀಪ ಕಾಂಚನ ಕ್ರಾಸ್ನಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತ ಪರಿಣಾಮ ವಾಹನ ಸವಾರರು ಸಂಚಾರಕ್ಕೆ ಪರದಾಟ ನಡೆಸಿದ ಘಟನೆ ಜೂ.12ರಂದು ಸಂಜೆ ನಡೆದಿದೆ.
ಸಂಜೆ ವೇಳೆಗೆ ಸುರಿದ ಭಾರೀ ಮಳೆಯಿಂದಾಗಿ ಕಾಂಚನ ಕ್ರಾಸ್ ಸಮೀಪ ಹೆದ್ದಾರಿಯಲ್ಲಿ ಸುಮಾರು 2 ಅಡಿಗೂ ಹೆಚ್ಚು ಮಳೆ ನೀರು ನಿಂತಿತ್ತು. ಇಲ್ಲಿ ಹರಿಯುತ್ತಿದ್ದ ತೋಡಿನ ಅರ್ಧಭಾಗಕ್ಕೆ ಹೆದ್ದಾರಿ ಕಾಮಗಾರಿ ವೇಳೆ ತಡೆಗೋಡೆ ನಿರ್ಮಿಸಿ ಮಣ್ಣು ಹಾಕಲಾಗಿದೆ. ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ನೀರು ರಸ್ತೆಯಲ್ಲಿಯೇ ನಿಂತಿತ್ತು. ಘನ ವಾಹನಗಳು ಮಳೆ ನೀರಿನಲ್ಲೇ ಸಂಚರಿಸಿದ್ದು ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆನೀರು ಹೆದ್ದಾರಿ ಪಕ್ಕದ ತೋಟಗಳಿಗೂ ನುಗ್ಗಿದೆ.
ಸಾಲುಗಟ್ಟಿ ನಿಂತ ವಾಹನ:
ಹೆದ್ದಾರಿಯಲ್ಲಿಯೇ ಮಳೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾದ ಪರಿಣಾಮ ಹೆದ್ದಾರಿಯ ಎರಡೂ ಕಡೆಯು ಸುಮಾರು 2 ಕಿ.ಮೀ.ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಳಾಲು ಬೈಲು ಎಂಬಲ್ಲಿಯೂ ಕೃತಕ ನೆರೆಯಿಂದಾಗಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸುಮಾರು ಅರ್ಧತಾಸಿಗೂ ಹೆಚ್ಚು ಹೊತ್ತು ಅಡಚಣೆ ಉಂಟಾಗಿತ್ತು ಎಂದು ವರದಿಯಾಗಿದೆ.