ವಿಟ್ಲ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸರಕಾರಿ ವೈದ್ಯರ ನಕಲಿ ಸಹಿ ಹಾಗೂ ಸೀಲ್ ಬಳಸಿ ವಂಚಿಸಲೆತ್ನಿಸಿದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಶಾಲಾ ರಸ್ತೆಯ ನಿವಾಸಿ, ವಿಟ್ಲ ಪೋಲಿಸ್ ಠಾಣೆಯ ಮುಂಭಾಗದಲ್ಲಿರುವ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ನ ಮಾಲಕ ಅಬ್ದುಲ್ ಖಾದರ್ ರವರ ಪುತ್ರ ಶೇಖ್ ಫಿರೋಜ್ ಆದಂ(26 ವ.)ಬಂಧಿತ ಆರೋಪಿಯಾಗಿದ್ದಾರೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವೇದಾವತಿ ರವರ ನಕಲಿ ಸಹಿ ಹಾಗೂ ಸೀಲ್ ಬಳಸಿ ವಂಚನೆ ನಡೆಸಿದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ ನೀಡಿದ ದೂರಿನ ಮೇಲೆ ಫಿರೋಜ್ ಆದಂರನ್ನು ಬಂಧಿಸಲಾಗಿದೆ.
ಇಸುಬು ಎಂಬ ವ್ಯಕ್ತಿ ಲೈಸನ್ಸ್ ಮರುನವೀಕರಣ ಮಾಡಲು ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಗೆ ಅರ್ಜಿ ಸಲ್ಲಿಸಿದರು. ಆದರೆ ಲೈಸೆನ್ಸ್ ಮರುನವೀಕರಣಕ್ಕೆ ವೈದ್ಯರ ಪಿಟ್ ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂಬುದು ಇಲಾಖೆಯ ನಿಯಮವಾಗಿತ್ತು. ಆದರೆ ಈ ಡ್ರೈವಿಂಗ್ ಸ್ಕೂಲ್ ನ ಮಾಲಕರ ಮಗ ವೈದ್ಯರ ನಕಲಿ ಸಹಿ ಹಾಗೂ ಸೀಲ್ ಬಳಸಿ ಲೈಸೆನ್ಸ್ ನವೀಕರಣ ಮಾಡಲು ಮೆಲ್ಕಾರ್ ಆರ.ಟಿ.ಒ. ಕಚೇರಿಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ವಿಟ್ಲ ಸರಕಾರಿ ವೈದ್ಯರ ಒರಿಜಿನಲ್ ಸಹಿ ಹಾಗೂ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ಸ್ ನವರು ಕಳಹಿಸಿದ ಪಿಟ್ ನೆಸ್ ಅರ್ಜಿ ಯಲ್ಲಿರುವ ವೈದ್ಯರ ಸಹಿ ತಾಳೆ ಮಾಡಿದಾಗ ವ್ಯತ್ಯಾಸ ಗಳು ಕಂಡು ಬಂದ ಹಿನ್ನೆಲೆಯಲ್ಲಿ ಆರ್.ಟಿ.ಒ.ಇನ್ಸ್ ಪೆಕ್ಟರ್ ಅವರು ವಿಟ್ಲ ವೈದ್ಯರಿಗೆ ಪರಿಶೀಲನೆಗಾಗಿ ಕಳುಹಿಸಿ ಕೊಟ್ಟಿದ್ದಾರೆ. ಈ ವೇಳೆ ಆರೋಗ್ಯ ಅಧಿಕಾರಿ ಅದನ್ನು ಪರಿಶೀಲಿಸಿದಾಗ ನಕಲಿ ಸಹಿ ಹಾಕಿದ ಬಗ್ಗೆ ಗಮನಕ್ಕೆ ಬಂದು ಹಿನ್ನೆಲೆಯಲ್ಲಿ ಅವರು ತನಿಖೆಗಾಗಿ ವಿಟ್ಲ ಪೋಲಿಸರಿಗೆ ದೂರು ನೀಡಿದ್ದರು.
ತನಿಖೆ ಆರಂಭಿಸಿದ ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ವರು ಆರಂಭದಲ್ಲಿ ಲೈಸೆನ್ಸ್ ನವೀಕರಣ ಮಾಡಲು ಅರ್ಜಿ ನೀಡಿದ ಇಸುಬು ರವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ನಲ್ಲಿ ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡಿದ್ದು, ಆತನ ಮಾಹಿತಿಯ ಆಧಾರದಲ್ಲಿ ಫಿರೋಜ್ ಆದಂ ರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ದಾಗ ನಿಜಾಂಶ ಬಯಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.