- ಮಕ್ಕಳ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಜವಾಬ್ದಾರಿಯೂ ಇದೆ-ಭಾಸ್ಕರ ಕೋಡಿಂಬಾಳ
ಪುತ್ತೂರು:ಓದಿಸುವುದು ಹೆತ್ತವರದ್ದು, ಕಲಿಸುವುದು ಶಿಕ್ಷಕರದ್ದು ಅಂತ ತಿಳಿಯಬಾರದು. ಮಕ್ಕಳ ಹಾಗೂ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಜವಾಬ್ದಾರಿಯೂ ಬಹಳಷ್ಟಿದೆ ಎಂದು ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಹೇಳಿದರು.
ಅವರು ಜೂ.18 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 2021-22ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳ ಪ್ರತಿಯೊಂದು ದೂರಿಗೆ ಸಮರ್ಥನೆ ಮಾಡುತ್ತಾ ಹೋದರೆ ಮಕ್ಕಳು ಅನ್ಯ ದಾರಿ ಹಿಡಿಯಲು ಕಾರಣವಾಗಬಲ್ಲುದು. ಆದ್ದರಿಂದ ಮಕ್ಕಳ ಪ್ರತಿಯೊಂದು ದೂರನ್ನು ಪರಾಮರ್ಶಿಸುವುದು ಬಹಳ ಮುಖ್ಯ. ಮನೆಯಲ್ಲಿ ಹಾಗೂ ಶಾಲೆಯಲ್ಲಿ ಉತ್ತಮ ವಾತಾವರಣವಿದ್ದಾಗ ಮಗುವಿನ ಬೆಳವಣಿಗೆ ಉತ್ತಮವಾಗಿ ಸಾಗುತ್ತದೆ ಎಂದರು.
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಮನುಷ್ಯ ಮನೆಯಲ್ಲಿ ಕುಂದು-ಕೊರತೆಗಳ ನಡುವೆ, ಸಮಾಜದಲ್ಲಿ ಒಳಿತು-ಕೆಡುಕುಗಳ ಮಧ್ಯೆ ಜೀವನ ಸಾಗಿಸುತ್ತಿದ್ದಾನೆ ಮಾತ್ರವಲ್ಲ ಇದುವೇ ಜೀವನವಾಗಿದೆ. ಮಾನವ ಜೀವನದಲ್ಲಿ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಸಮಾಜದ ಸತ್ಫಜೆಗಳನ್ನಾಗಿ ಮಾಡಲು ಹೆತ್ತವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಮಕ್ಕಳಿಗೆ ಕಷ್ಟ ಏನೆಂಬುದನ್ನು ಗೊತ್ತುಪಡಿಸಬೇಕು. ಮಕ್ಕಳಿಗೆ ವಿಷವನ್ನು ಬಿತ್ತುವುದರ ಬದಲು ಒಳ್ಳೆಯ ವಿಚಾರವನ್ನು ಬಿತ್ತುವಂತಾಗಬೇಕು. ಮಕ್ಕಳೇ ನಮ್ಮ ಸಂಪತ್ತು, ಮಕ್ಕಳ ಹೃದಯ ಅರಳುವಂತಾಗಬೇಕು ಎಂದು ಮನಗಾಣಬೇಕು ಎಂದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ್ ಮಾತನಾಡಿ, ಮಗುವಿನಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಬೆಳಕಿಗೆ ಬರುವಂತೆ ಆಗಲು ನಾವೆಲ್ಲ ಪ್ರಯತ್ನಿಸಬೇಕು. ಪೋಷಕರು ಮತ್ತು ಶಿಕ್ಷಕರು ಜೊತೆಯಾಗಿ ಸಾಗಿದಾಗ ಮಗುವಿನ ಭವಿಷ್ಯ ಉಜ್ವಲವಾಗುತ್ತದೆ ಜೊತೆಗೆ ಮಗುವಿನ ನಡುವೆ ಹೋಲಿಕೆಯನ್ನು ಖಂಡಿತಾ ಮಾಡಬೇಡಿ ಎಂದರು.
ಶಿಕ್ಷಕಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಿಸ್ ಶಾಲೆಯ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದರು. ಶಿಕ್ಷಕಿ ಸುನೀತಾ ಡಿ’ಸಿಲ್ವ ಸ್ವಾಗತಿಸಿ, ದೀಪ್ತಿ ಡಿ’ಅಲ್ಮೇಡ ವಂದಿಸಿದರು. ಶಿಕ್ಷಕಿ ಡೈನಾ ನೊರೋನ್ಹಾ ವರದಿ ವಾಚಿಸಿದರು. ಶಿಕ್ಷಕಿ ರೀನಾ ಸೆರಾವೋರವರು ಕಾರ್ಯಕಾರಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಶಿಕ್ಷಕಿ ಸರಿತಾ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.
ಮಕ್ಕಳನ್ನು ಜೀವನದಲ್ಲಿ ಸಿಹಿಯೊಂದಿಗೆ ಕಹಿಯೂ ಇರಲಿ…
ಮಕ್ಕಳ ಬಗ್ಗೆ ಜಾಸ್ತಿ ಕನಿಕರ ತೋರಿಸಿದರೆ ಮಕ್ಕಳು ಭವಿಷ್ಯದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಮಕ್ಕಳ ಕೈಗೆ ಮೊಬೈಲು ಕೊಡಬೇಡಿ, ಹಾಳಾಗ್ತರೆ ಎಂದವರು ಕೊರೊನಾ ಕಾಲದಲ್ಲಿ ಮಕ್ಕಳ ಕೈಗೆ ಮೊಬೈಲ್ ಕೂಡ ಸಿಕ್ಕಾಯ್ತು. ಮಕ್ಕಳ ಮೇಲೆ ವಾತ್ಸಲ್ಯವಿರಲಿ, ಜಾಸ್ತಿ ವಾತ್ಸಲ್ಯ ಬೇಡ. ಸಿಹಿಯ ಜೊತೆಗೆ ಕಹಿಯೂ ಇರಲಿ ಆವಾಗ ಮಕ್ಕಳು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. –ವಂ|ಸ್ಟ್ಯಾನಿ ಪಿಂಟೋ, ಕ್ಯಾಂಪಸ್ ನಿರ್ದೇಶಕರು, ಫಿಲೋಮಿನಾ ಕಾಲೇಜು