- ಸಂತಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಗೆ ಕಿರೀಟವಿದ್ದಂತೆ: ಡಾ.ಜಯರಾಜ್
- ಶಿಕ್ಷಣ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರಬಾರದು: ರೆ.ಫಾ. ವರ್ಗೀಸ್ ಕಾವನಾಟಿಲ್
ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ವಿದ್ಯಾಸಂಸ್ಥೆಯ ಸ್ಥಾಪಕ ದಿನಾಚರಣೆ, ಕಾಲೇಜಿನ ಸಂಸತ್ತಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜೂ.30ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಸಂಯೋಜಕ ಡಾ.ಜಯರಾಜ್ರವರು ಮಾತನಾಡಿ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ನೆಲ್ಯಾಡಿಗೆ ಕಿರೀಟವಿದ್ದಂತೆ. ವಿದ್ಯಾರ್ಥಿಗಳು ಓದು ಮತ್ತು ಬರೆಯುವುದನ್ನು ಮಾಡಿದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಇದಕ್ಕಾಗಿ ನಿರಂತರವಾದ ಕಠಿಣ ಅಧ್ಯಯನ ಅಗತ್ಯವಿದೆ. ಪಠ್ಯದ ಜೊತೆ ಮಕ್ಕಳಿಗೆ ಸಾಮಾನ್ಯ ಜ್ಞಾನ ಅತಿ ಅಗತ್ಯವಾಗಿದೆ ಎಂದರು. ಇನ್ನೋರ್ವ ಅತಿಥಿ ಕೊಣಾಲು ಸೈಂಟ್ ತೋಮಸ್ ಚರ್ಚ್ನ ವಿಕಾರ್ ರೆ.ಫಾ.ವರ್ಗೀಸ್ ಕಾವನಾಟಿಲ್ರವರು ಮಾತನಾಡಿ, ಬದುಕುವ ನಾಲ್ಕು ದಿನದ ಜೀವನವನ್ನು ಸಂತೋಷದಿಂದ ಕಾಣಬೇಕು. ಪವಿತ್ರ ಗ್ರಂಥಗಳನ್ನು, ಪುಸ್ತಕಗಳನ್ನು ಓದಬೇಕು. ಶಿಕ್ಷಣವೆಂಬುದು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ:
2021-22ನೇ ಎಸ್ಎಸ್ಎಲ್ ಸಿ, ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಡಿದ ನಗದು ಬಹುಮಾನವನ್ನು ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಯಿತು. 2022-23ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕರಾದ ಭವ್ಯ, ಕರುಣಾಕರ, ಜೆಸಿಂತಾ, ಗೀತಾ ವಾಚಿಸಿದರು.
ಸರ್ವಧರ್ಮ ಪ್ರಾರ್ಥನೆ:
ಸ್ಥಾಪಕ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ರೆ.ಫಾ.ವರ್ಗೀಸ್ ಕಾವನಾಟಿಲ್ರವರು ಧರ್ಮಗುರುಗಳಾಗಿ ದೀಕ್ಷೆ ಪಡೆದ 13ನೇ ವರ್ಷದ ವಾರ್ಷಿಕೋತ್ಸವವನ್ನು ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಈ ಸಂದರ್ಭದಲ್ಲಿ ಆಚರಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಎಲಿಯಾಸ್ ಎಂ.ಕೆ., ಪ್ರೌಢಶಾಲಾ ಆಂಗ್ಲಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕ ಹರಿಪ್ರಸಾದ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎಂ.ವೈ.ತೊಮಸ್ ಹಾಗೂ ವಿದ್ಯಾರ್ಥಿ ನಾಯಕರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕರಾದ ಆರ್. ವೆಂಕಟರಮಣ, ರವೀಂದ್ರ ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹ್ನನ್, ನಿವೃತ್ತ ಕಚೇರಿ ಸಿಬ್ಬಂದಿಗಳಾದ ಜೋಸೆಫ್, ಬೆಳಿಯಪ್ಪ, ಮಾಧವ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು, ಉಪನ್ಯಾಸಕರುಗಳು ಉಪಸ್ಥಿತರಿದ್ದರು. ಎಂ.ವೈ.ತೋಮತ್ ಸ್ವಾಗತಿಸಿದರು. ಹರಿಪ್ರಸಾದ್ ಕೆ.ವಂದಿಸಿದರು. ಉಪನ್ಯಾಸಕ ವಿಶ್ವನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ದಿವ್ಯ ಕೃತಜ್ಞತಾ ಬಲಿಪೂಜೆ ಹಾಗೂ ಬಿಷಪರ ಪುತ್ತಳಿಗೆ ಹಾರಾರ್ಪಣೆ ಮಾಡಲಾಯಿತು.