ಪುತ್ತೂರು:ಯಕ್ಷಗಾನ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರಿಗೆ ಉಡುಪಿ ಶ್ರೀ ಅದಮಾರು ಮಠವು ಪ್ರಾಯೋಜಿಸುವ ‘ಶ್ರೀ ನರಹರಿ ತೀರ್ಥ’ ಪ್ರಶಸ್ತಿ ಪ್ರಾಪ್ತವಾಗಿದೆ. ಜು.11ರಂದು ಸಂಜೆ ಉಡುಪಿಯ ಶ್ರೀ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯು ರೂ. 50 ಸಾವಿರ ನಗದನ್ನು ಒಳಗೊಂಡಿರುತ್ತದೆ.
ಪೆರುವೋಡಿ ನಾರಾಯಣ ಭಟ್ಟರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ಮಾನವನ್ನು ತಂದುಕೊಟ್ಟ ಹಾಸ್ಯಗಾರ. ‘ಪಾಪಣ್ಣ ವಿಜಯ’ ಪ್ರಸಂಗದ ‘ಪಾಪಣ್ಣ’ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿ ಪೆರುವೋಡಿಯವರ ಕಲ್ಪನಾಶಕ್ತಿಗೆ ಮಾದರಿ. ದಯಮಂತಿ ಪುನರ್ ಸ್ವಯಂವರ ಪ್ರಸಂಗದ ‘ಬಾಹುಕ’ ಪಾತ್ರಕ್ಕೆ ಮರುಹುಟ್ಟು ನೀಡಿದವರು. ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ.ಪೆರುವೋಡಿ ನಾರಾಯಣ ಭಟ್ಟರಿಗೆ ಈಗ 95ರ ವಯಸ್ಸು. ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಅನುಭವಿ. ಸ್ವಂತದ್ದಾದ ‘ಮೂಲ್ಕಿ ಮೇಳ’ದ ಯಜಮಾನಿಕೆಯು ಒಂದು ಕಾಲಘಟ್ಟದ ವಿದ್ಯಮಾನ. ಪೆರುವೋಡಿಯವರ ಕಲಾ ಬದುಕಿನ ಚಿತ್ರಣ ‘ಹಾಸ್ಯಗಾರನ ಅಂತರಂಗ’ ಪುಸ್ತಕವನ್ನು ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ. ಕಾಂತಾವರದ ಕನ್ನಡ ಸಂಘವು ತನ್ನ ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಪುಸ್ತಿಕೆಯನ್ನು ಪ್ರಕಟಸಿದೆ.