ನೆಲ್ಯಾಡಿ: ಭಾರೀ ಗಾಳಿ ಹಾಗೂ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಬೃಹತ್ ಮರವೊಂದು ಮುರಿದು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ಜು.೧೪ರಂದು ಮಧ್ಯಾಹ್ನ ನಡೆದಿದೆ. ಮರ ವಿದ್ಯುತ್ ತಂತಿಯ ಮೇಲೆಯೇ ಬಿದ್ದ ಪರಿಣಾಮ ವಿದ್ಯುತ್ ಕಂಬ ಹಾಗೂ ತಂತಿಗೆ ಹಾನಿಯಾಗಿದೆ.
ಜು.14ರಂದು ಮಧ್ಯಾಹ್ನದ ವೇಳೆಗೆ ನೆಲ್ಯಾಡಿ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಬಂದಿದ್ದು ಈ ವೇಳೆ ಮಣ್ಣಗುಂಡಿಯಲ್ಲಿ ಹೆದ್ದಾರಿ ಪಕ್ಕದ ಬೃಹತ್ ಮರವೊಂದು ವಿದ್ಯುತ್ ತಂತಿಯ ಮೇಲೆಯೇ ಬಿದ್ದು ಹೆದ್ದಾರಿಗೆ ಬಿದ್ದಿದೆ. ಇದರಿಂದಾಗಿ ಎರಡು ವಿದ್ಯುತ್ ಕಂಬಗಳಿಗೆ ಹಾಗೂ ವಿದ್ಯುತ್ ತಂತಿಗೆ ಹಾನಿಯಾಗಿದೆ. ಮರ ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿದರು. ನೆಲ್ಯಾಡಿ ಮೆಸ್ಕಾಂ ಜೆಇ ರಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ವಿದ್ಯುತ್ ತಂತಿ ತೆರವುಗೊಳಿಸಿ ಯಾವುದೇ ಅನಾಹುತವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ನೆಲ್ಯಾಡಿ ಹೊರಠಾಣೆಯ ಹೆಡ್ಕಾನ್ಸ್ಸ್ಟೇಬಲ್ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು ಸಂಚಾರ ಸುಗಮಗೊಳಿಸಿದರು. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.