ಉಪ್ಪಿನಂಗಡಿ: ವಾಹನ ಸಂಚಾರ ಯಾ ನಡೆದು ಹೋಗುವುದಕ್ಕೂ ಯೋಗ್ಯವಲ್ಲದ ರೀತಿಯಲ್ಲಿ ಕೆಸರುಗದ್ದೆಯಂತಾಗಿದ್ದ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಮ್ಮಾರದಿಂದ ಕಲ್ಲಡ್ಕ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ಥಿ ಮಾಡಿಸಿ ತನ್ನ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.
ಹಿರೇಬಂಡಾಡಿ ಗ್ರಾಮದ ಕೆಮ್ಮಾರದಿಂದ ಕಲ್ಲಡ್ಕ ಸಂಪರ್ಕ ಕಲ್ಪಿಸುವ ರಸ್ತೆ ಮಳೆಗಾಲ ಪ್ರಾರಂಭ ಆಗುತ್ತಿದ್ದಂತೆ ರಸ್ತೆಯಲ್ಲಿ ಕೆಸರು ತುಂಬಿಕೊಂಡು ನಡೆದಾಡುವುದಕ್ಕೂ ಸಂಕಷ್ಟ ಎದುರಿಸುವಂತಾಗಿತ್ತು. ಸುಮಾರು 10ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವೃದ್ಧರು, ಶಾಲಾ ಮಕ್ಕಳು ತೀರಾ ಸಮಸ್ಯೆ ಎದುರಿಸುತ್ತಾ ನಡೆದಾಡುವಂತಾಗಿತ್ತು. ಇದನ್ನು ಮನಗಂಡ ಸ್ಥಳೀಯ ನಿವಾಸಿ ಜಗನ್ನಾಥ ಶೆಟ್ಟಿ ಬೇರಿಕೆಜಾಲುರವರು ರಸ್ತೆಗೆ ಕೆಂಪು ಕಲ್ಲು ಹಾಸಿ ರಸ್ತೆ ದುರಸ್ಥಿ ಮಾಡಿ ತನ್ನ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.