ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಸ್ಕೂಟರ್ಗೆ ಡಿಕ್ಕಿಯಾಗಿ ಪರಾರಿಯಾಗಿದ್ದ ಬೈಕನ್ನು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದಲ್ಲಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್ರವರ ನೇತೃತ್ವದಲ್ಲಿ ಪೊಲೀಸರು ಪತ್ತೆ ಮಾಡಿದ ಪ್ರಕರಣ ಜು.31ರಂದು ನಡೆದಿದೆ.
ಬೆಳಿಗ್ಗೆ ಪುತ್ತೂರು ನಿವಾಸಿ ಕೆ.ಎಸ್.ಗೋಪಾಲಕೃಷ್ಣ ಭಟ್ರವರು ತನ್ನ ಟಿವಿಎಸ್ ಜ್ಯುಪಿಟರ್ ಸ್ಕೂಟರ್ನಲ್ಲಿ ಸಾಲ್ಮರ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಎಪಿಎಂಸಿ ರಸ್ತೆಯಲ್ಲಿ ವಿರುದ್ಧ ಕಡೆಯಿಂದ ಬಂದ ಬೈಕೊಂದು ಡಿಕ್ಕಿಯಾಗಿ ಪರಾರಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಕೆ.ಎಸ್ ಗೋಪಾಲಕೃಷ್ಣ ಭಟ್ರವರು ಗಾಯಗೊಂಡಿದ್ದರು. ಆದರೆ ಡಿಕ್ಕಿಯಾದ ಬೈಕ್ ಸವಾರ ಬೈಕ್ ನಿಲ್ಲಿಸದೆ ಪರಾರಿಯಾಗಿದ್ದ. ಘಟನೆಯ ಕುರಿತು ಗೋಪಾಲಕೃಷ್ಣ ಭಟ್ರವರು ಸಂಚಾರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪುತ್ತೂರು ಸಂಚಾರ ಠಾಣೆ ಎಸ್.ಐ ರಾಮನಾಯ್ಕ ಮತ್ತು ಸಿಬ್ಬಂದಿಗಳು ಸ್ಥಳೀಯ ಮತ್ತು ಹಲವು ಕಡೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಮಧ್ಯಾಹ್ನದ ವೇಳೆಗೆ ಹಿಟ್ ಆಂಡ್ ರನ್ ಪ್ರಕರಣದ ಬೈಕ್ ಅನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.