ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದಿಂದ ಕುರಿಯಕ್ಕೆ ತೆರಳುವ ರಸ್ತೆ ಬಳಿ ರಸ್ತೆಗೆ ತಾಗಿಕೊಂಡಿರುವ ಖಾಸಗಿ ಜಾಗದಲ್ಲಿ ಕೊಳೆತ ತ್ಯಾಜ್ಯವನ್ನು ಸುರಿಯುತ್ತಿದ್ದು ಪರಿಸರ ಗಬ್ಬೆದ್ದು ವಾಸನೆ ಬರುತ್ತಿದೆ. ಇಲ್ಲಿ ತ್ಯಾಜ್ಯ ಹಾಕುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ಅಗ್ರಹಿಸಿದ್ದಾರೆ.
ಖಾಸಗಿ ವ್ಯಕ್ತಿಗೆ ಸೇರಿದ ಈ ಜಾಗದಲ್ಲಿ ಜಾಗದ ಮಾಲಿಕರಿಗೆ ಗೊತ್ತಿಲ್ಲದಂತೆ ತ್ಯಾಜ್ಯ ಹಾಕುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ, ಹಳಸಿದ ಅನ್ನಪದಾರ್ಥಗಳನ್ನು ಇಲ್ಲಿ ಸುರಿಯುತ್ತಿದ್ದಾರೆ. ಪಕ್ಕದಲ್ಲೇ ಅನೇಕ ಬಾಡಿಗೆ ಮನೆಗಳಿದ್ದು ಅಲ್ಲಿ ಸೂಕ್ತ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ಮಾಡದೇ ಇರುವುದು ಇಲ್ಲಿ ತ್ಯಾಜ್ಯ ಸುರಿಯಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಒಳಮೊಗ್ರು ಗ್ರಾಪಂ ನಲ್ಲಿ ತ್ಯಾಜ್ಯ ಸಂಗ್ರಹಣಾ ವಾಹನದ ವ್ಯವಸ್ಥೆ ಇದೆ, ತ್ಯಾಜ್ಯ ಸಂಸ್ಕರಣಾ ಘಟಕವೂ ಇದೆ. ಕಸವನ್ನು ಎಲ್ಲೆಂದರಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಎಸೆಯದಂತೆ ಗ್ರಾಪಂ ಸೂಚನೆಯನ್ನೂ ನೀಡಿದೆ. ಆದರೆ ಇಲ್ಲಿನ ಕೆಲವರು ಗ್ರಾಪಂ ಸೂಚನೆಯನ್ನು ಗಾಳಿಗೆ ತೂರಿ ಸಿಕ್ಕಸಿಕ್ಕಲ್ಲೆಲ್ಲಾ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ತ್ಯಾಜ್ಯ ಹಾಕಿರುವ ಪಕ್ಕದಲ್ಲೇ ಅರೇಬಿಕ್ ಶಾಲೆ ಇದ್ದು ಮಕ್ಕಳು ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಕ್ಲಾಸಿನಲ್ಲಿ ಕೂರಬೇಕಾದ ಅನಿವಾರ್ಯತೆ ಒದಗಿದೆ. ಗ್ರಾಪಂ ತಕ್ಷಣವೇ ಅಲ್ಲಿ ತ್ಯಾಜ್ಯ ಹಾಕುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.