ಪುತ್ತೂರು:ಕಟ್ಟಡಕ್ಕೆ ಹಾನಿಯಾಗದೆ, ಬೀಗವೂ ಒಡೆಯದೆ ಕಟ್ಟಡದ ಗೋದಾಮಿನಲ್ಲಿದ್ದ ಅಡಿಕೆ ಚೀಲಗಳಿಂದ ಎರಡು ದಿನದಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಕಳವಾಗಿದ್ದು, ಸುಮಾರು ರೂ.2 ಲಕ್ಷ ಮೌಲ್ಯದ ಅಡಿಕೆ ಕಳವಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಕ್ರಂಪಾಡಿ ರಿದ್ದಿ ಸಿದ್ದಿ ಲಾಜಿಸ್ಟಿಕ್ ಎಂಬ ಸಂಸ್ಥೆಯ ಗೋಡೌನ್ನಿಂದ ಜು.28 ಮತ್ತು ಆ.1ರಂದು ಅಡಿಕೆ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ರಿದ್ದಿ ಸಿದ್ದಿ ಲಾಜಿಸ್ಟಿಕ್ ಸಂಸ್ಥೆ ಪುತ್ತೂರಿನ ವ್ಯಾಪಾರಿಗಳ ಅಡಿಕೆಯನ್ನು ಗುಜರಾತ್ಗೆ ಹಾಗು ಇತರ ಕಡೆಗಳಿಗೆ ಸಾಗಾಣಿಕೆ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಜು.27 ಸಂಜೆಯಿಂದ ಮತ್ತು 28ರ ಬೆಳಗ್ಗಿನ ಅವಽಯಲ್ಲಿ ತಲಾ 65 ಕೆ.ಜಿ ತೂಕದ 4 ಚಿಲ ಅಡಿಕೆ ಮತ್ತು ಜು.30ರ ರಾತ್ರಿಯಿಂದ ಆ.1ರ ಬೆಳಗಿನ ಅವಧಿಯಲ್ಲಿ ತಲಾ 65 ಕೆ.ಜಿ ತೂಕದ 5 ಚೀಲ ಅಡಿಕೆ ಕಾಣೆಯಾಗಿದೆ. ಈ ಕುರಿತು ಸಂಸ್ಥೆಯ ಮೆನೇಜರ್ ಮಹೇಶ್ ಅವರು ಸಂಸ್ಥೆಯ ಮಾಲಕ ಧೀರನ್ ದಿಲೀಪ್ ಷಾ ಅವರಿಗೆ ತಿಳಿಸಿದ್ದಾರೆ. ಈ ಕುರಿತು ಧೀರನ್ ದಿಲೀಪ್ ಷಾ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆದರೆ ಇಲ್ಲಿ ಕಳವಾದ ಗೋಡೌನ್ನ ಕಟ್ಟಡಕ್ಕೆ ಹಾನಿ ಆಗಿಲ್ಲ. ಕಟ್ಟಡದ ಶಟರ್ ಬೀಗವೂ ಒಡೆದಿಲ್ಲ.ಆದರೂ ಕಳವಾಗಿರುವ ಹಿನ್ನೆಲೆಯಲ್ಲಿ ಅನುಮಾನಗಳು ವ್ಯಕ್ತವಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.