ಪುತ್ತೂರು:ಮಡಿಕೇರಿ, ಸಂಪಾಜೆ, ಕಲ್ಲುಗುಂಡಿಯಲ್ಲಿ ಭಾರೀ ಮಳೆಗೆ ಹೊಳೆಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಸುದ್ದಿ ಬಿಡುಗಡೆ ಪತ್ರಿಕೆ ಹಿರಿಯ ಸಿಬ್ಬಂದಿ ಜಯರಾಮ ಭಟ್ ಅವರ ಸಂಪಾಜೆಯ ಮನೆಯ ಬಾಗಿಲ ತನಕ ಹೊಳೆ ನೀರು ಹರಿಯುತ್ತಿದ್ದು ಮನೆ ಮಂದಿ ಆತಂಕದಲ್ಲಿದ್ದಾರೆ.
ಜಯರಾಮ ಭಟ್ ಅವರ ಮನೆಯ ಸಮೀಪವೇ ಹೊಳೆಯೊಂದು ಹರಿಯುತ್ತಿದ್ದು, ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಹೊಳೆಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಆ.3ರಂದು ಅವರ ಮನೆಯ ಬಾಗಿಲ ತನಕ ಹೊಳೆ ನೀರು ಮೇಲಕ್ಕೆ ಬಂದಿದೆ. ಮನೆಯಂಗಳದ ಬಾವಿ, ಪಂಪ್ ನೀರಿನಲ್ಲಿ ಮುಳುಗಡೆಯಾಗಿದೆ. ರಾತ್ರಿ ವೇಳೆ ಹೊಳೆ ನೀರು ತಗ್ಗಿದೆ ಎಂದು ಜಯರಾಮ ಭಟ್ ತಿಳಿಸಿದ್ದಾರೆ. ಇದರ ಜೊತೆಗೆ ಹೊಳೆಯಲ್ಲಿ ನೀರಿನ ರಭಸಕ್ಕೆ ಕೊಯಿನಾಡು ಸೇತುವೆಗೆ ಹಾನಿಯಾಗಿದ್ದು ಮಂಗಳೂರು, ಮಡಿಕೇರಿ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.