ಪುತ್ತೂರು:ಪುತ್ತೂರು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯವಾದಿ ಅರುಣ್ ಬಿ.ಕೆ.ಅವರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರಕಾರದ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಅರುಣ್ ಬಿ.ಕೆ.ರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ವ್ಯವಸ್ಥಾ ಪ್ರಮುಖ್ ಆಗಿದ್ದಾರೆ.
ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2)ರನ್ವಯ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರವನ್ನು ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ ಎಂದು ಆದೇಶದಲ್ಲಿದೆ.
ಪುತ್ತೂರಿನ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರ ಕಚೇರಿಯಲ್ಲಿ ಸಹಾಯಕ ವಕೀಲರಾಗಿ ಸುಮಾರು ಒಂದೂವರೆ ವರ್ಷ ತನ್ನ ವೃತ್ತಿ ನಿರ್ವಹಿಸಿದ್ದ ಅರುಣ್ ಬಿ.ಕೆ.ಅವರು ಬಳಿಕ ಪುತ್ತೂರು ಕಿಲ್ಲೆ ಮೈದಾನದ ಬಳಿಯ ಪುತ್ತೂರು ಸೆಂಟರ್ನಲ್ಲಿ ಸ್ವಂತ ಕಚೇರಿ ಆರಂಭಿಸಿದ್ದರು. ತನ್ನ ತಂದೆಯಂತೆಯೇ ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಸಂಘದ ಮೂಲಕವೇ ಚಿಕ್ಕಮಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಅರುಣ್ರವರು ಬಳಿಕ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ, ಪದವಿ ಪಡೆದು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ತಾಲೂಕು ನಿವೃತ್ತ ಸರ್ವೇಯರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾದ ಬಪ್ಪಳಿಗೆ ಕರ್ಕುಂಜ ನಿವಾಸಿ ಬಿ.ಕೆ.ಬಿರ್ಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರರಾಗಿರುವ ಅರುಣ್ರವರ ಅಕ್ಕ ಅರ್ಚನಾ ಬಿ.ಕೆ.ಅವರು ನೋಟರಿ ನ್ಯಾಯವಾದಿಯಾಗಿದ್ದಾರೆ. ಇನ್ನೋರ್ವ ಅಕ್ಕ ಅಶ್ವಿನಿ ಗೃಹಿಣಿಯಾಗಿದ್ದಾರೆ.