ದುಡ್ಡಿಗೋಸ್ಕರ ಬಡವರ ರಕ್ತ ಹೀರುತ್ತೀರಿ : ಅಕ್ರಮ ಸಕ್ರಮ ಬೈಠಕ್‌ನಲ್ಲಿ ಕಡಬ ತಹಸಿಲ್ದಾರ್ ವಿರುದ್ಧ ಆಕ್ರೋಶ

0

  • ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆದ ಬೈಠಕ್ ಭ್ರಷ್ಟಾಚಾರದ ವಿರುದ್ಧ ಸದಸ್ಯರ ಅಕ್ರೋಶ
  • ಕಾನೂನು ಬಾಹಿರವಾಗಿ ಹಣ ಪಡೆದುಕೊಂಡು ಎಷ್ಟು ಕಡತಗಳನ್ನು ಮಾಡಿಕೊಟ್ಟಿದ್ದೀರೆಂದು ಗೊತ್ತಿದೆ
  • ಅರ್ಹ ಕಡತಗಳನ್ನು ಅನಗತ್ಯವಾಗಿ ತಡೆಹಿಡಿದು ದುಡ್ಡಿಗಾಗಿ ಬಡವರ ರಕ್ತ ಹೀರುತ್ತೀರಿ
  • ನಾವು ಮನಸ್ಸು ಮಾಡಿದರೆ ತಹಸಿಲ್ದಾರ್ ಕುರ್ಚಿಯಲ್ಲಿ ನಿಮ್ಮನ್ನು ಒಂದು ನಿಮಿಷವೂ ಕೂರಲು ಬಿಡೋದಿಲ್ಲ

194 ಕಡತ ವಿಲೇವಾರಿ
ಸಭೆಯಲ್ಲಿ 194 ಕಡತಗಳನ್ನು ವಿಲೇವಾರಿ ಮಾಡಲಾಯಿತು.

6 ಕಡತ ಮರು ಪರಿಶೀಲನೆ
6 ಕಡತಗಳನ್ನು ಕಳುಹಿಸಲಾಯಿತು.

ಕಡಬ:ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಅಕ್ರಮ ಸಕ್ರಮ ಸಮಿತಿ ಸದಸ್ಯರು, ಸಚಿವ ಎಸ್.ಅಂಗಾರ ಅವರ ಎದುರೇ ಕಡಬ ತಹಸಿಲ್ದಾರ್ ಅವರ ವಿರುದ್ಧ “ಅರ್ಹ ಕಡತಗಳನ್ನು ಅನಗತ್ಯವಾಗಿ ತಡೆಹಿಡಿದು ದುಡ್ಡಿಗಾಗಿ ಬಡವರ ರಕ್ತ ಹೀರುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಆ.23ರಂದು ನಡೆಯಿತು.
ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಅಕ್ರಮ-ಸಕ್ರಮ ಸರಕಾರಿ ಕೃಷಿ ಜಮೀನುಗಳ ಸಕ್ರಮೀಕರಣ ಸಭೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆಯಿತು.
ಅಕ್ರಮ-ಸಕ್ರಮ ಕಡತ ವಿಲೇವಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಸಚಿವರ ಎದುರೇ ಕಡಬ ತಹಸಿಲ್ದಾರ್ ವಿರುದ್ಧ ನೇರ ಆರೋಪ ವ್ಯಕ್ತವಾಯಿತು.ಬೆಳಿಗ್ಗೆ ಹನ್ನೊಂದು ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಮಧ್ಯಾಹ್ನದ ಬಳಿಕ ಈ ಘಟನೆ ನಡೆಯಿತು.ಸಭೆಯಲ್ಲಿದ್ದ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಚರ್ಚೆಗೆ ಮುನ್ನುಡಿ ಬರೆದರೆ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಅರ್ಧ ಗಂಟೆಗೂ ಹೆಚ್ಚು ಕಾಲ ತಹಸೀಲ್ದಾರ್, ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಅಕ್ರಮ ಸಕ್ರಮ ಕಡತವೊಂದರ ಮಂಜೂರಾತಿ ಬಾಕಿ ಬಗ್ಗೆ ಬೈಠಕ್‌ನಲ್ಲಿ ಪ್ರಸ್ತಾಪವಾದಾಗ,ಅದರ ಮಂಜೂರಾತಿಗೆ ಕಾನೂನು ತೊಡಕು ಇದೆ ಎಂದು ತಹಸೀಲ್ದಾರ್ ಅನಂತಶಂಕರ್ ಹೇಳಿದರು.ಅವರ ಉತ್ತರದಿಂದ ಅಕ್ರೋಶಗೊಂಡ ಕೃಷ್ಣ ಶೆಟ್ಟಿಯವರು, “ನೀವು ಕಾನೂನು ಬಾಹಿರವಾಗಿ ಎಷ್ಟು ಕಡತಗಳನ್ನು ಹಣ ಪಡೆದು ಮಾಡಿಕೊಟ್ಟಿದ್ದೀರಿ ಎಂದು ನನಗೆ ಗೊತ್ತಿದೆ.ಅರ್ಹ ಕಡತಗಳನ್ನು ಅನಾವಶ್ಯಕವಾಗಿ ತಡೆ ಹಿಡಿದು ದುಡ್ಡಿಗೋಸ್ಕರ ಬಡವರ ರಕ್ತ ಹೀರುತ್ತೀರಿ,ನಾವು ಮನಸ್ಸು ಮಾಡಿದರೆ ನೀವು ತಹಸೀಲ್ದಾರ್ ಚೇರಲ್ಲಿ ಒಂದು ನಿಮಿಷವೂ ಕೂರಲು ಬಿಡೋದಿಲ್ಲ.ನೀವು ಎಲ್ಲೆಲ್ಲಿ, ಏನೇನು ಅಕ್ರಮ ಮಾಡಿದ್ದೀರಿ ಎನ್ನುವ ಸಂಪೂರ್ಣ ಮಾಹಿತಿ ನನಗೆ ಲಭ್ಯವಾಗಿದೆ.ನೀವು ನಿವೃತ್ತಿಯಾದರೂ ನಿಮ್ಮನ್ನು ಬೆಂಬಿಡದೆ ಕಾಡಲು ನಮಗೆ ಗೊತ್ತಿದೆ” ಎಂದು ಎಚ್ಚರಿಕೆ ನೀಡಿದರು.ಈ ವೇಳೆ ರಾಕೇಶ್ ರೈ ಕೆಡೆಂಜಿ ಅವರೂ ತಹಸೀಲ್ದಾರ್ ವಿರುದ್ಧ, “ನೀವು ಕೆಲವು ಕಡತಗಳನ್ನು ಪುರ್ವಾಗ್ರಹ ಪೀಡಿತರಾಗಿ ತಡೆಹಿಡಿಯುತ್ತೀರಿ” ಎಂದು ತರಾಟೆಗೆತ್ತಿಕೊಂಡರು.”ಗೋಳಿತೊಟ್ಟು ಗ್ರಾಮದ ಗಣೇಶ್ ಬೊಟ್ಟಿಮಜಲು ಎಂಬವರು ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ವಿರುದ್ಧ ಮಾತನಾಡಿದ್ದನ್ನೇ ದ್ವೇಷವಾಗಿ ಇಟ್ಟುಕೊಂಡು ಕಳೆದ ಆರು ತಿಂಗಳಿಂದ ಅವರ ಕಡತವನ್ನು ಮಂಜೂರು ಹಂತಕ್ಕೆ ಬಿಡಲಿಲ್ಲ.ಈಗ ಕೇಳಿದರೆ ಕಾನೂನು ತೊಡಕು ಹೇಳುತ್ತೀರಿ,ಆದರೆ ಅದೇ ಸರ್ವೆ ನಂಬರ್‌ನಲ್ಲಿ ಇತರರು ನೀಡಿದ ಅರ್ಜಿಯನ್ನು ಹಣ ಪಡೆದು ಸಕ್ರಮ ಮಾಡಿದ್ದೀರಿ,ನೀವು ಪ್ರತೀ ಕಡತಕ್ಕೆ ಹಣ ಪಡೆದೇ ಮಂಜೂರಾತಿಗೆ ಅನುವು ಮಾಡುತ್ತೀರಿ ಎನ್ನುವ ದೂರುಗಳಿವೆ, ಮಾತ್ರವಲ್ಲ ಮಹಿಳೆಯೊಬ್ಬರಿಂದ ಲಕ್ಷಕ್ಕೂ ಅಧಿಕ ಹಣ ಪಡೆದು ಅವರ ಕಡತವನ್ನು ಮಾಡಿಕೊಟ್ಟಿಲ್ಲ ಎನ್ನುವ ದೂರು ಬಂದಿದೆ.ಆ ಮಹಿಳೆಯ ಕಣ್ಣೀರಿನ ಶಾಪ ನಿಮಗೆ ತಟ್ಟುತ್ತದೆ” ಎಂದು ಹೇಳಿದ ರಾಕೇಶ್ ರೈಯವರು,”ನನಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ನೈತಿಕತೆ ಇದೆ, ನಾನು ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಚಹಾ ಕುಡಿದು ಹೋಗಿರುವುದು ಬಿಟ್ಟರೆ ಯಾರಿಂದಲೂ ನಯಾ ಪೈಸೆ ಪಡೆದವನಲ್ಲ.ಬೇಕಾದರೆ ಈವರೆಗೆ ಚಹಾ ಕುಡಿದ ಹಣವನ್ನು ಇಲ್ಲೇ ಕೊಟ್ಟು ಹೋಗುತ್ತೇನೆ” ಎಂದು ನೊಂದು ಹೇಳಿದರಲ್ಲದೆ,”ಬಡವರಿಗೆ ಕೆಲಸ ಮಾಡಿಕೊಡಿ ಲಂಚಕ್ಕೆ ಬಾಯಿ ಬಿಟ್ಟು ಅವರಿಗೆ ಅನ್ಯಾಯ ಮಾಡಬೇಡಿ” ಎಂದು ಅಧಿಕಾರಿಗಳಿಗೆ ಹೇಳಿದರು.ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವಾಗ, ಕೆಲವೊಂದು ಕಡತಗಳಿಗೆ ಕಾನೂನು ತೊಡಕಿನ ವಿಷಯವನ್ನು ಮುಂದಿಟ್ಟು ಮಾತನಾಡಿದ ತಹಸಿಲ್ದಾರ್ ಅವರು, ಆರೋಪಗಳಿಗೆ ಸಂಬಂಧಿಸಿ ನಿರುತ್ತರರಾಗಿಯೇ ಇದ್ದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರೂ ಏನೂ ಮಾತನಾಡದರೆ ಕಡಗಳನ್ನು ಪರಿಶೀಲನೆ ನಡೆಸುತ್ತಿದ್ದರು.ನೆರೆದ ಫಲಾನುಭವಿಗಳು ಮತ್ತು ಅಧಿಕಾರಿಗಳು ಮೌನವಾಗಿದ್ದರು.ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ, ತಹಶೀಲ್ದಾರ್ ಅನಂತ ಶಂಕರ್, ಉಪ ತಹಶಿಲ್ದಾರ್‌ಗಳಾದ ಮನೋಹರ ಕೆ.ಟಿ, ಗೋಪಾಲ ಕಲ್ಲುಗುಡ್ಡೆ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸಚಿವ ಎಸ್.ಅಂಗಾರ ಮೌನ
ಸಭೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯ ಹಾಗೂ ಮಾಜಿ ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿಯವರು ತಹಸೀಲ್ದಾರ್ ಅವರನ್ನು ಸುಮಾರು ಅರ್ಧ ಗಂಟೆಗಳ ಕಾಲ ತರಾಟೆಗೆ ತೆಗೆದುಕೊಂಡಿದ್ದರೂ ಸಚಿವ ಎಸ್. ಅಂಗಾರ ಮಾತ್ರ ಮೌನಕ್ಕೆ ಶರಣಾಗಿ ಕಡತಕ್ಕೆ ಸಹಿ ಹಾಕುತ್ತಿದ್ದರು

LEAVE A REPLY

Please enter your comment!
Please enter your name here