ಕಾಣಿಯೂರು: ಹಿಂದು ಧರ್ಮದ ಸಂಸ್ಕೃತಿಯನ್ನು ವೃದ್ಧಿಪನಗೊಳ್ಳುವಂತಹ ವಾತವರಣ ಇಂತಹ ಸಾರ್ವಜನಿಕ ಗಣೇಶೋತ್ಸವದ ಮೂಲಕ ನಡೆಯುತ್ತದೆ. ಪ್ರಾಕೃತಿಕ ನೈಸರ್ಗಿಕವಾದ ವಿಚಾರವೇ ಗಣೇಶನ ಆಕಾರದಲ್ಲಿ ಪ್ರಕಟಗೊಳ್ಳುತ್ತದೆ.
ಸನಾತನ ಹಿಂದು ಧರ್ಮದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಸಹಕಾರಿ. ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಲೀ ಎಂದು ಧಾರ್ಮಿಕ ಮುಖಂಡ ರಾಜೇಶ್ ಮೇನಾಲ ಸುಳ್ಯ ಹೇಳಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಆಶ್ರಯದಲ್ಲಿ ಆ 31ಮತ್ತು ಸೆ 1ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ ೩೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ವಹಿಸಿದ್ದರು. ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಕ್ ತೋಟ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಭಟ್ ಕಟತ್ತಾರು ಉಪಸ್ಥಿತರಿದ್ದರು. ಭಜನಾ ಮಂಡಳಿಯ ಕಾರ್ಯದರ್ಶಿ ಜಯಂತ ಅಬೀರ ವರದಿ ವಾಚಿಸಿ, ಜತೆ ಕಾರ್ಯದರ್ಶಿ ವಿನಯ ಎಳುವೆ ಬಹುಮಾನ ವಿತರಣಾ ನಿರ್ವಹಿಸಿದರು. ಭಜನಾ ಮಂಡಳಿ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಸ್ವಾಗತಿಸಿ, ಭಜನಾ ಮಂಡಳಿಯ ಕಾನೂನು ಸಲಹೆಗಾರ ರಾಧಾಕೃಷ್ಣ ಸಾರಿತ್ತಡಿ ವಂದಿಸಿದರು. ತಾ.ಪಂ ಮಾಜಿ ಉಪಾಧ್ಯಕ್ಷ ಬಾಬು ಮಾದೋಡಿ ಕಾರ್ಯಕ್ರಮ ನಿರೂಪಿಸಿದರು.
ವೈಭವದ ಶೋಭಾಯಾತ್ರೆ: ಸೆ 1ರಂದು ಕಾಣಿಯೂರು ಮುಖ್ಯರಸ್ತೆಯ ಮೂಲಕ ಭವ್ಯ ಮೆರವಣಿಗೆಯು ವಿಜೃಂಭನೆಯಿಂದ ಸಾಗಿ ಕಜೆಬಾಗಿಲು ಹೊಳೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ತಂಭನಗೊಂಡಿತ್ತು.