ಕುಂಬ್ರ ಕೆಐಸಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಸಮಾರಂಭ

0

ಸೌಹಾರ್ದತೆಯಿಂದ ಬಾಳಿದಾಗ ಸಮಾಜದಲ್ಲಿ ನೆಮ್ಮದಿ ನೆಲೆಗೊಳ್ಳಲು ಸಾಧ್ಯ-ಅಶೋಕ್‌ ಕುಮಾರ್ ರೈ

ಪುತ್ತೂರು: ಅವರವರ ಧರ್ಮವನ್ನು ಅನುಸರಿಸಿ ಇತರ ಧರ್ಮವನ್ನು ಗೌರವಿಸಿದಾಗ ಧರ್ಮಗಳ ನಡುವೆ ಸೌಹಾರ್ದತೆ ಮೂಡುತ್ತದೆ. ಸೌಹಾರ್ದತೆ ಇದ್ದಾಗ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಕೆಲವರು ಅನವಶ್ಯಕ್ವಾಗಿ ಧರ್ಮಗಳ ನಡುವೆ ವಿಷಬೀಜ ಬಿತ್ತುವುದನ್ನು ನಾವು ಕಂಡಿದ್ದೇವೆ. ಇದೆಲ್ಲಾ ರಾಜಕೀಯಕ್ಕೆ ಬೇಕಾಗಿ ನಡೆಯುತ್ತದೆ. ಸೌಹಾರ್ದತೆಯಿಂದ ನಾವೆಲ್ಲರೂ ಬಾಳಿದಾಗ ಊರು, ದೇಶ ಅಭಿವೃದ್ಧಿಯಾಗುತ್ತದೆ, ಹಿಂದಿನ ಕಾಲದ ಸಂಬಂಧ, ಅನ್ಯೋನ್ಯತೆ ಈಗ ಮಾಯವಾಗುತ್ತಿದೆ, ಅದು ಪುನರ್‌ಸ್ಥಾಪಿಸಬೇಕಾದ ಅನವಾರ್ಯತೆಯಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು. ‌

ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ(ಕೆಐಸಿ) ಇಲ್ಲಿ ಜೂ.5ರಂದು ಶಾಸಕರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲಾ ಧರ್ಮಗಳ ಧರ್ಮಗುರುಗಳು, ಸ್ವಾಮೀಜಿಗಳು ಸೇರಿ ಒಂದೇ ವೇದಿಕೆಯಲ್ಲಿ ಕುಳಿತು ಧರ್ಮದ ಬೋಧನೆ ಮಾಡುವ ಅವಶ್ಯಕತೆಯಿದೆ. ಬೇರೆ ಬೇರೆ ಧರ್ಮದ ವ್ಯತ್ಯಾಸಗಳನ್ನು ಯುವಕರ ತಲೆಗೆ ತುಂಬಿಸಲು ಪ್ರಯತ್ನ ಮಾಡುತ್ತಿದ್ದಾರೋ ಅದರ ಬಗ್ಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.


ಕೆಐಸಿ ವಿದ್ಯಾಸಂಸ್ಥೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಇಲ್ಲಿಂದ ಹೋಗುವಾಗ ಈ ಶಾಲೆಯನ್ನು ಗಮನಿಸಿದ್ದೇನೆ. ಇದು ಶಿಸ್ತಿನ ಶಾಲೆ ಎಂದು ನಾನು ಗಮನಿಸಿದ್ದೇನೆ ಎಂದು ಶಾಸಕರು ಈ ವಿದ್ಯಾಸಂಸ್ಥೆಗೆ ಮುಂದಕ್ಕೆ ನನ್ನಿಂದಾಗುವ ಎಲ್ಲ ಸಹಕಾರವನ್ನು ನೀಡಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.

ಸ್ವಾಗತಿಸಿದ ಕೆಐಸಿಯ ವರ್ಕಿಂಗ್ ಕಮಿಟಿ ಸದಸ್ಯ ಶಕೂರ್ ಹಾಜಿ ಕಲ್ಲೇಗ ಮಾತನಾಡಿ ಶಾಸಕ ಅಶೋಕ್ ಕುಮಾರ್ ರೈಯವರ ಮೇಲೆ ನಮಗೆಲ್ಲಾ ಸಾಕಷ್ಟು ಭರವಸೆಗಳಿದ್ದು ಅವರು ಕ್ಷೇತ್ರವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಮಾಡಲಿದ್ದಾರೆ. ಹಿಂದಿನ ಕಾಲದಲ್ಲಿ ನಮ್ಮೂರಿನಲ್ಲಿದ್ದ ಶಾಂತಿ, ಸಹೋದರತೆ, ಸಹಬಾಳ್ವೆ ಮುಂದೆಯೂ ಇರಬೇಕಾದ ಅವಶ್ಯಕತೆಯಿದೆ ಎಂದು ಹೇಳಿ ಕುಂಬ್ರ ಕೆಐಸಿಗೆ ಶಾಸಕರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ರಸ್ತೆ ಬೇಡಿಕೆ, ಈಡೇರಿಕೆಯ ಭರವಸೆ:
ಕೆಐಸಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಅನೀಸ್ ಕೌಸರಿ ಅವರು ಪ್ರಸ್ತಾವನೆಗೈದು ಮಾತನಾಡಿ ವಿದ್ಯಾಸಂಸ್ಥೆಯ ಬಗ್ಗೆ ವಿವರಿಸಿದರು. ಬಳಿಕ ಸಂಸ್ಥೆಗೆ ಅಗತ್ಯವಿರುವ ಎರಡು ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು. ಕೆಐಸಿಗೆ ಬರುವ ರಸ್ತೆಗೆ ಕಾಂಕ್ರಿಟೀಕರಣ ಮಾಡಿಕೊಡಬೇಕು ಮತ್ತು ವಿದ್ಯಾಸಂಸ್ಥೆಯ ಲೈಬ್ರೆರಿಗೆ ಪುಸ್ತಕದ ಅವಶ್ಯಕತೆಯಿದ್ದು ಅದನ್ನು ಒದಗಿಸಿಕೊಡಬೇಕೆಂದು ಅನೀಸ್ ಕೌಸರಿ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ರಸ್ತೆ ಬೇಡಿಕೆ ಖಂಡಿತ ಈಡೇರಿಸುತ್ತೇನೆ. ಇಲ್ಲಿನ ಕಾಂಗ್ರೆಸ್ ವಲಯಾಧ್ಯಕ್ಷರಾದ ಅಶೋಕ್ ಪೂಜಾರಿಯವರಿಗೆ ಇದರ ಜವಾಬ್ದಾರಿ ವಹಿಸಿಕೊಡುತ್ತೇನೆ, ಇದೇ ಬರುವ ಡಿಸೆಂಬರ್ ಒಳಗಡೆ ಇಲ್ಲಿಗೆ ರಸ್ತೆ ಆಗಲಿದೆ ಎಂದು ಭರವಸೆ ನೀಡಿದರು. ಲೈಬ್ರೆರಿಗೆ ಬೇಕಾದ ಪುಸ್ತಕದ ಬಗ್ಗೆ ವಿಚಾರಿಸಿಕೊಂಡು ಅವಕಾಶಗಳಿದ್ದರೆ ಖಂಡಿತ ಒದಗಿಸುತ್ತೇನೆ ಎಂದು ಅವರು ಹೇಳಿದರು.

ಸನ್ಮಾನ:
ಶಾಸಕರಿಗೆ ಕೆಐಸಿ ವಿದ್ಯಾಸಂಸ್ಥೆ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪರಿಸರ ದಿನಾಚರಣೆ:
ಶಾಸಕರು ಕೆಐಸಿ ವಠಾರದಲ್ಲಿ ಗಿಡ ನೆಡುವ ಮೂಲಕ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆಗೆ ಸಾಂಕೇತಿಕ ಚಾಲನೆ ನೀಡಿದರು.

ವೇದಿಕೆಯಲ್ಲಿ ಪ್ರಮುಖರಾದ ಕೆ.ಎಂ ಬಾವಾ ಹಾಜಿ ಕೂರ್ನಡ್ಕ, ಅಶೋಕ್ ಪೂಜಾರಿ ಬೊಳ್ಳಾಡಿ, ಅಬ್ದುಲ್ ರಹಿಮಾನ್ ಆಝಾದ್, ಪುರಂದರ್ ರೈ ಕೋರಿಕ್ಕಾರು, ಮೆಲ್ವಿನ್ ಮೊಂತೆರೋ, ರಕ್ಷಿತ್ ರೈ ಮುಗೇರು, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಸತ್ತಾರ್ ಕೌಸರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾ.ಪಂ ಸದಸ್ಯರಾದ ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ, ಶಾರದಾ, ಪ್ರಮುಖರಾದ ಇಬ್ರಾಹಿಂ ಮುಲಾರ್, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಯಾಕೂಬ್ ಮುಲಾರ್,ಹಬೀಬ್‌ ಕಣ್ಣೂರು, ಮಜೀದ್ ಬಾಳಾಯ, ಮಹಮ್ಮದ್ ಬೊಳ್ಳಾಡಿ, ಬಶೀರ್ ಕೌಡಿಚ್ಚಾರ್, ಫಾರೂಕ್ ಮಗಿರೆ, ಆಚಿ ಕುಂಬ್ರ, ಅಶ್ರಫ್ ಸನ್‌ಶೈನ್, ನಾಸಿರ್ ಪೆರ್ಲಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಮಹಮ್ಮದ್ ಸಾಬ್ ವಂದಿಸಿದರು.

LEAVE A REPLY

Please enter your comment!
Please enter your name here