ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೆಜ್ಜೆಗಿರಿ ಮೇಳದ “ಪ್ರಚಂಡ ಮಹಿಷಾಸುರ” ಮೊದಲ ಪ್ರಸಂಗ ಉದ್ಘಾಟನೆ

0

ಬಡಗನ್ನೂರು: ಶ್ರೀ ಗೆಜ್ಜೆಗಿರಿ ಮೇಳದ ‘ಪ್ರಚಂಡ  ಮಹಿಷಾಸುರ’ ಕನ್ನಡ ಪೌರಾಣಿಕ ನೂತನ ಪ್ರಸಂಗವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ ಉದ್ಘಾಟಿಸಿದರು.

ಕೋಶಾಧಿಕಾರಿ ಪದ್ಮರಾಜ್ ಆರ್., ಮಾತನಾಡಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ವೈಭವದ ದಸರಾ ನಡೆಯುವ  ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಚಂಡ ಮಹಿಷಾಸುರ ಪ್ರಸಂಗ ಉದ್ಘಾಟನೆಗೊಂಡು ಪ್ರಪ್ರಥಮ ಪ್ರದರ್ಶನ ಕಾಣಬೇಕು ಎಂಬ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಮೇಳದ ಯಕ್ಷಗಾನ ಮಂಡಳಿಯ ಇಚ್ಛೆಗೆ ಅನುಗುಣವಾಗಿ ಶ್ರೀ ಕ್ಷೇತ್ರದಲ್ಲಿ ಪ್ರಪ್ರಥಮ ಪ್ರದರ್ಶನಗೊಳ್ಳುತ್ತಿರುವುದು ಸಂತಸದ ವಿಷಯ ಎಂದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಗೆಜ್ಜೆಗಿರಿ ಮೇಳ ಪ್ರಾರಂಭಗೊಂಡ ಪ್ರಥಮ ವರ್ಷದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದಿದೆ ಎಂದರು. 

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ,ಗೆಜ್ಜೆಗಿರಿ ಮೇಳದ ಸಂಚಾಲಕ ನವೀನ್ ಸುವರ್ಣ ಸಜಿಪ, ಪ್ರಸಂಗ ಕರ್ತ ನಿತಿನ್ ತೆಂಕಕಾರಂದೂರು, ಕಲಾವಿದರಾದ ದಿನೇಶ್ ರೈ ಕಡಬ, ನೈನಾಡು ಸತೀಶ್ ಪೂಜಾರಿ, ಗೆಜ್ಜೆಗಿರಿ ಮಂಗಳೂರು ನಗರ ವಲಯ ಸಂಚಾಲಕ ಹರೀಶ್ ಕೆ ಪೂಜಾರಿ, ಉರ್ವ ಬಿಲ್ಲವ ಸಂಘದ ಅಧ್ಯಕ್ಷ ಹರಿಪ್ರಸಾದ್, ಪ್ರಮುಖರಾದ ಸುರೇಶ್ ಕುಳಾಯಿ, ರಕ್ಷಿತ್ ಕೆ.ಬಿರ್ವ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here