ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆದ ನವರಾತ್ರಿ ಉತ್ಸವ ಅ.12ರಂದು ಸಂಪನ್ನಗೊಂಡಿತು.


ನವರಾತ್ರಿಯ ಉತ್ಸವದ ಅಂತಿಮ ದಿನವಾದ ಅ.12ರ ವಿಜಯ ದಶಮಿಯಂದು ಕ್ಷೇತ್ರದಲ್ಲಿ ವಿಶೇಷವಾಗಿ ಚಂಡಿಕಾ ಯಾಗ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಚಂಡಿಕಾ ಯಾಗ ಪ್ರಾರಂಭ, ಅಕ್ಷರಭ್ಯಾಸ, ಭಜನೆ, ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ದೇವರಿಗೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಂಡಿತು.


ಅ.3ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆತಿದೆ. ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ವಿವಿಧ ಕಲಾ ತಂಡಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವರಿಗೆ ನಿತ್ಯಪೂಜೆ, ದುರ್ಗಾಪೂಜೆ, ಲಲಿತ ಸಹಸ್ರನಾಮ ಪಾರಾಯಣ, ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು. ನವರಾತ್ರಿಯಲ್ಲಿ ಅ.11ರಂದು ಆಯುಧ ಪೂಜೆ, ವಾಹನ ಪೂಜೆ, ಅ.12ರಂದು ಅಕ್ಷರಭ್ಯಾಸ, ಚಂಡಿಕಾಯಾಗ ನೆರವೇರಿತು.


16 ಕಲಾ ತಂಡಗಳಿಂದ ಲಲಿತಾ ಕಲಾ ಸೇವೆ:
ಕ್ಷೇತ್ರದಲ್ಲಿ 9 ದಿನಗಳ ಕಾಲ ನಡೆದ ನವರಾತ್ರಿ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ದೇವಿಗೆ ಪ್ರೀತ್ಯರ್ಥವಾದ ಲಲಿತ ಕಲಾ ಸೇವೆಯು ಪ್ರತಿದಿನ ಮೇಲೈಸಲ್ಪಟ್ಟಿದೆ. 9 ದಿನಗಳಲ್ಲಿ ಸುಮಾರು 16 ವಿವಿಧ ಕಲಾ ತಂಡಗಳಿಂದ ವಿನೂತನ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇವಾ ರೂಪದಲ್ಲಿ ದೇವಿಗೆ ಸಮರ್ಪಿಸಿದ್ದಾರೆ. ಪೊಳಲಿ ಬೊಕ್ಕಸ ಶಿವರಂಜಿನಿ ಕಲಾ ಕೇಂದ್ರದ ಕಲಾವಿದರಿಂದ ‘ಗಾನಾಮೃತ’ ವಾದ್ಯ, ಗಾನ, ಸಂಕೀರ್ತನೆ, ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರ ಶಿಷ್ಯೆಯರಿಂದ ‘ನೃತ್ಯಾರ್ಚನಂ’ ಭರತನಾಟ್ಯ, ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ‘ಗಿರಿಜಾ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ, ಗಮಕವಾಚನದಲ್ಲಿ ಮಂಜುಳಾ ಸುಬ್ರಹ್ಮಣ್ಯ ಭಟ್ ವಾಚನ ಹಾಗೂ ಮಹಾದೇವ ಭಟ್ ಭಂಡಿಹೊಳೆ ವ್ಯಾಖ್ಯಾನ ನೀಡಿದರು. ರಾತ್ರಿ ವಸುಧಾರಾ ಕಲಾಕೇಂದ್ರ ಮಂಚಿ ಬೋಳಂತೂರು ಇವರಿಂದ ‘ನೂಪುರನಾದ’, ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದವರಿಂದ ‘ಗರುಡ ಗರ್ವ ಭಂಗ’ ಯಕ್ಷಗಾನ ತಾಳಮದ್ದಳೆ, ಶ್ರೀಶಾರದಾ ಕಲಾ ಕೇಂದ್ರ ಕುಂಬ್ರ ಶಾಖೆಯವರಿಂದ ‘ನೃತ್ಯ ಸಮೂಹ’, ರಾತ್ರಿ ಲಾಸ್ಯ ನಾಟ್ಯನಿಕೇತನ ವೀರಮಾರುತಿನಗರ ನರಿಕೊಂಬು ಇವರಿಂದ ‘ನಾಟ್ಯಾಂಜಲಿ’, ಯಕ್ಷಕೂಟ ಪುತ್ತೂರು ಇವರಿಂದ ‘ಸತ್ವ ಶೈಥಿಲ್ಯ’ ಯಕ್ಷಗಾನ ತಾಳಮದ್ದಳೆ, ಗಾನ ಸರಸ್ವತಿ ಸಂಗೀತ ಕಲಾ ಶಾಲೆ ನೆಹರುನಗರ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’, ನೃತ್ಯೋಪಾಸನಾ ಕಲಾ ಸಂಘದವರಿಂದ ‘ನೃತ್ಯೋಹಂ’ ಶಿವಾಂಜಲಿ ಕಲಾ ಕೇಂದ್ರ ಪೆರ್ಲ, ಸಾಜ ಪರಿಯಾಲ್ತಡ್ಕ ಶಾಖೆಯ ವಿದ್ಯಾರ್ಥಿಗಳಿಂದ ‘ನೃತ್ಯ ಪಲ್ಲವ’ ಭರತನಾಟ್ಯ ಹಾಗೂ ಜಾನಪದ ನೃತ್ಯಗಳು, ಮನಸ್ವಿನಿ ವಿಜಯಕುಮಾರ್ ಮೈಸೂರು ಇವರಿಂದ ‘ವಯೋಲಿನ್ ವಾದನ’, ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಡಾ.ದುರ್ಗಾಪರಮೇಶ್ವರಿ ಎಚ್.ಕೆ ಹಾಡುಗಾರಿಕೆಯಲ್ಲಿ ‘ಸಂಗೀತ’, ಮದರಾಸು ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಡಾ|ಸತ್ಯನಾರಾಯಣ ಭಟ್ ಇವರಿಂದ ‘ಭಗವದ್ಭಕ್ತಿ’ ಧಾರ್ಮಿಕ ಪ್ರವಚನ, ಕೃಷ್ಣ ಕಿಶೋರ್ ಮತ್ತು ಅಶೋಕ್ ಯಂ ಬಳಗ ಬದಿಯಡ್ಕ ಇವರಿಂದ ‘ಭಕ್ತಿ ಗಾನಸುಧಾ’ ನಡೆಯಿತು.


27 ಭಜನಾ ತಂಡಗಳಿಂದ ಭಜನಾ ಸೇವೆ, 9 ಮನೆಯವರು ನವರಾತ್ರಿಯ ಸಮಾರಾಧನೆಯ ಸೇವೆ ಸಲ್ಲಿಸಿ ಕೃತಾರ್ಥರಾದರು. ನವರಾತ್ರಿಯ ಒಂಬತ್ತು ದಿನಗಳಲ್ಲಿ ಸುಮಾರು 13,೦೦೦ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರವನ್ನು ಒದಗಿಸಲಾಗಿತ್ತು. ಉತ್ಸವದಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿತ್ತು. ಪ್ರತಿದಿನವೂ ಕಾರ್ಯಕ್ರಮ ಮುಗಿದ ಕೂಡಲೇ ಎಲ್ಲೆಡೆ ಸ್ವಚ್ಚತೆ ಮಾಡಲಾಗುತ್ತಿತ್ತು.


ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ., ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ನಾಯಕರುಗಳು ಸೇರಿದಂತೆ ಸಾವಿರಾರು ಮಂದಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

LEAVE A REPLY

Please enter your comment!
Please enter your name here