ವಿಟ್ಲ: ಸೇವೆ ಖಾಯಂಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ರವರಿಗೆ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾರವರು ಪ್ರಮಾಣ ವಚನ ಬೋಧಿಸಿದರು.
ಹೈಕೋರ್ಟ್ ಸಭಾಂಗಣದಲ್ಲಿ ಫೆ.5ರಂದು ನಡೆದ ಸರಳ ಸಮಾರಂಭದಲ್ಲಿ ನ್ಯಾ| ರಾಜೇಶ್ ರೈ ಅವರಿಗೆ ಮುಖ್ಯ ನ್ಯಾಯಮೂರ್ತಿಗಳು ಪ್ರತಿಜ್ಞಾ ವಿಧಿ ಮತ್ತು ಅಧಿಕಾರ ಗೌಪ್ಯತೆ ಬೋಧಿಸಿ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ರೈ ಅವರು 2023ರ ಫೆ.9ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಕೇಂದ್ರ ಸರಕಾರ ಅವರ ಸೇವೆಯನ್ನು ಖಾಯಂಗೊಳಿಸಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈಯವರು 1999ರಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿ ಬಳಿಕ ಕ್ರಿಮಿನಲ್ ಸೈಡ್ ಪ್ರಾಕ್ಟಿಸ್ ಮಾಡಿ ಎರಡು ವರ್ಷಗಳ ಕಾಲ ಹೈಕೋರ್ಟ್ಲ್ಲಿ ಸರಕಾರಿ ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಕೇಂದ್ರ ಸರಕಾರದ ಹಿರಿಯ ವಕೀಲರಾಗಿ 6 ವರುಷಗಳ ಕಾಲ ಕರ್ತವ್ಯ ನಿರ್ವಹಿಸಿ ಬಳಿಕ, ಜಾರಿ ನಿರ್ದೇಶನಾಲಯದಲ್ಲಿ ವಕೀಲರಾಗಿ 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎ ವಕೀಲರಾಗಿ 15 ವರ್ಷ ಸೇವೆ ಸಲ್ಲಿಸಿದ್ದರು. ಆ ಬಳಿಕ ಅವರನ್ನು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಕೇಂದ್ರ ಸರಕಾರ ನೇಮಿಸಿತ್ತು.
ಇಡಿ ಪರ ವಿಶೇಷ ಅಭಿಯೋಜಕರಾಗಿದ್ದರು:
ರಾಜೇಶ್ ರೈ ಕಲ್ಲಂಗಳ ಅವರು ಜಾರಿ ನಿರ್ದೇಶನಾಲಯದ ವಿಶೇಷ ಅಭಿಯೋಜಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಕರ್ನಾಟಕ ಅರಣ್ಯ, ಕೈಗಾರಿಕಾ ಅಭಿವೃದ್ಧಿ ನಿಗಮದ ಹಾಸನ ಜಿಲ್ಲಾ ಘಟಕದ ಸಹಾಯಕ ವ್ಯವಸ್ಥಾಪಕರಾಗಿದ್ದ ಬಿ.ಸಿ.ಶಾಂತಕುಮಾರ್ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ, ಹಣದ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ವಿಧಿಸಿ ಆದೇಶಿಸಿತ್ತು.ಈ ಪ್ರಕರಣದಲ್ಲಿ ಇಡಿ ಪರ ವಿಶೇಷ ಅಭಿಯೋಜಕರಾಗಿ ರಾಜೇಶ್ ರೈ ಕಲ್ಲಂಗಳ ಅವರು ವಾದಿಸಿದ್ದರು. ಕಲ್ಲಂಗಳ ದಿ.ವಾಸಪ್ಪ ಪೆರ್ಗಡೆ ಹಾಗೂ ದಿ.ಜಲಜಾಕ್ಷಿ ವಿ ಶೆಡ್ತಿರವರ ಮೂರನೇ ಪುತ್ರರಾಗಿರುವ ರಾಜೇಶ್ ರೈಯವರು ಪತ್ನಿ ರೇಷ್ಮಾ ರಾಜೇಶ್, ಮಕ್ಕಳಾದ ಸಾನಿಧ್ಯ ರೈ ಹಾಗೂ ಶಾಶ್ವತ್ ರೈರವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.