ಉಪ್ಪಿನಂಗಡಿ: ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆಯು ಮುಂದಾಗಿದೆ.

ಮೇ .28ರಂದು ಉಪ್ಪಿನಂಗಡಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕಾ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡುವಂತೆ ಶಾಸಕರಾದ ಅಶೋಕ್ ಕುಮಾರ್ ರೈಯವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯು ಮರುದಿನವೇ ಕಾರ್ಯಪ್ರವೃತ್ತವಾಗಿದ್ದು, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಪ್ರಬೋಷನರಿ ಎ.ಸಿ.ಎಫ್. ಹಸ್ತ ಅವರ ನೇತೃತ್ವದಲ್ಲಿ ಹಿರೇಬಂಡಾಡಿ- ಕೊಯಿಲ ಸಂಪರ್ಕ ರಸ್ತೆಯ ಬದಿ ರಾಮನಗರ ಪರಿಸರದಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವು ಮಾಡಲಾಯಿತು. ಈ ಸಂದರ್ಭ ಉಪ ಅರಣ್ಯಾಧಿಕಾರಿ ಭವಾನಿ ಶಂಕರ, ಅರಣ್ಯ ಗಸ್ತು ರಕ್ಷಕ ಉದಯ ಚಂದ್ರ, ದಿವಾಕರ ರೈ, ಅರಣ್ಯ ಪಾಲಕ ದಿನೇಶ ಇದ್ದರು.