ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ `ಸ್ವಾಗತ್’ – ಆರಂಭೋತ್ಸವದ ಉದ್ಘಾಟನೆ, ಮಾಹಿತಿ ಕಾರ್ಯಗಾರ

0

ವಿದ್ಯಾರ್ಥಿಗಳಲ್ಲಿ ಅಧ್ಯಯನಾಶಕ್ತಿ ಬೆಳೆದಾಗ ಗುರಿ ಯಶಸ್ವಿ-ಕೃಷ್ಣಮೋಹನ್ ಪಿ

ಪುತ್ತೂರು: ವಿದ್ಯಾರ್ಥಿಗಳನ್ನು ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಪ್ರತಿ ಸಂಸ್ಥೆಗಳ ಪಾಲು ಮಹತ್ತರವಾದದ್ದು. ಒಂದು ಉತ್ತಮ ಸಂಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ತಮ್ಮ ಆಯ್ಕೆಯ ವಿಷಯದ ಬಗ್ಗೆ ಅಧ್ಯಯನಾಶಕ್ತಿ ಬೆಳೆದಾಗ ಗುರಿ ತಲುಪಲು ಯಶಸ್ವಿ ಎನಿಸಿಕೊಳ್ಳುವುದು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಪಿ.ರವರು ಹೇಳಿದರು.


ಮೇ 30 ರಂದು ಸುದಾನ ಸಮೂಹ ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ಜರುಗಿದ ಸುದಾನ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ರಹಸ್ಯವು ಕಠಿಣ ಪರಿಶ್ರಮಕ್ಕೆ ಸೀಮಿತವಾಗಿಲ್ಲ, ಬದಲಾಗಿ ನಿಗದಿತ ವೇಳಾಪಟ್ಟಿಯ ಪ್ರಕಾರ ಸರಿಯಾದ ಯೋಜನೆ ಮತ್ತು ಅಧ್ಯಯನದ ಅಗತ್ಯವಿದೆ. ವಿದ್ಯಾರ್ಥಿಗಳು ವಿಷಯಗಳ ಬಗ್ಗೆ ಆಳವಾದ ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಲು ಪ್ರಾರಂಭಿಸಿದಾಗ ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.


ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆಯಿದ್ದಾಗ ಆ ಸಂಸ್ಥೆ ಮುಂದುವರೆಯುತ್ತದೆ-ಸಂತೋಷ್ ಭಂಡಾರಿ:
ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮಾತನಾಡಿ, ನೂತನ ಕಾಲೇಜಿನ ಪ್ರಥಮ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷನಾದ ಹೆಮ್ಮೆ ನನಗಿದೆ. ಸಂಸ್ಥೆಯಲ್ಲಿ ನುರಿತ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಪೂರಕವಾದ ವ್ಯವಸ್ಥೆ ಇದ್ದಾಗ ಆ ಸಂಸ್ಥೆ ಶಿಸ್ತುಬದ್ಧವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ ಮಾತ್ರವಲ್ಲ ಸಂಸ್ಥೆಗೆ ಉತ್ತಮ ಫಲಿತಾಂಶ ಬರುತ್ತದೆ. ಈ ನೂತನ ಸಂಸ್ಥೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯೇ ವಿಜ್ಞಾನ ವಿಭಾಗ ಭರ್ತಿಯಾಗಿರುವುದು ಖುಶಿಯ ವಿಚಾರ. ವಿದ್ಯಾರ್ಥಿಗಳು ತಮ್ಮ ಕಲಿಕಾ ದೃಷ್ಟಿಯ ಹಿನ್ನೆಲೆಯಲ್ಲಿ ಟಿ.ವಿ, ಮೊಬೈಲ್ ನಿಂದ ದೂರವಿದ್ದಾಗ ವಿದ್ಯಾರ್ಥಿಗಳು ಉನ್ನತ ಸ್ತರಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದರು.


ಬೌದ್ಧಿಕ ಜ್ಞಾನದೊಂದಿಗೆ ಸಾಮಾನ್ಯ, ಪ್ರಾಪಂಚಿಕ ಜ್ಞಾನ ಹೊಂದಿ-ಡಾ|ಪೀಟರ್ ವಿಲ್ಸನ್:
ಸುದಾನ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಹಾಗೂ ಸುದಾನ ಪದವಿ ಪೂರ್ವ ಕಾಲೇಜಿನ ಆಡಳಿತ ಸಮಿತಿಯ ಸಂಚಾಲಕ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪರಿಣತಿ, ಕೌಶಲ್ಯ, ನೈಪುಣ್ಯತೆ ಇರುವಂತಹ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಮಾನವವನ್ನು ರೂಪುಗೊಳಿಸುವುದೇ ಶಿಕ್ಷಣದ ಉದ್ಧೇಶವಾಗಿದೆ ಎಂದು ಮಾಜಿ ರಾಷ್ಟ್ರಪತಿ ಡಾ.ಕಲಾಂರವರ ಮಾತಿನಂತೆ ನಮ್ಮ ಸುದಾನ ವಿದ್ಯಾಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಸುದಾನ ಸಂಸ್ಥೆಯು ಸೆಂಟರ್ ಆಫ್ ಎಕ್ಸಲೆನ್ಸ್ ದೃಷ್ಟಿಕೋನದ ಮೂಲಕ ಮುಂದೆ ಸಾಗುತ್ತಿದೆ. ಜೀವನದಲ್ಲಿ, ಬದುಕಿನಲ್ಲಿ, ಶಿಕ್ಷಣದಲ್ಲಿ ಅತ್ತ್ಯುನ್ನತ ಸ್ಥಾನ ಪಡೆಯಯಬೇಕಾದರೆ ಅದು ಒಂದು ದಿನದ ಪ್ರಯತ್ನದಿಂದ ಆಗುವುದಿಲ್ಲ, ನಿರಂತರ ಪ್ರಯತ್ನದೊಂದಿಗೆ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವುದರ ಜೊತೆಗೆ ಬೌದ್ಧಿಕ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನ, ಪ್ರಾಪಂಚಿಕ ಜ್ಞಾನ ಹೊಂದುವಂತಾದಾಗ ಜೀವನ ಪರಿಪೂರ್ಣವಾಗುತ್ತದೆ ಎಂದರು.


ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜು ಆಡಳಿತ ಸಮಿತಿಯ ಕೋಶಾಧಿಕಾರಿ ಆಸ್ಕರ್ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಸ್ವಾಗತಿಸಿದರು. ಉಪನ್ಯಾಸಕರಾದ ಮುಕುಂದಕೃಷ್ಣ, ಯತೀಶ್ ಕುಮಾರ್, ಪಲ್ಲವಿ, ನವ್ಯ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಸಿಲ್ವಿಯಾ ಡಿ’ಸೋಜ, ಕ್ರಿಸ್ಟೋಫರ್ ಮಾಬೆನ್‌ರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಲಾಯಿತು. ಉಪನ್ಯಾಸಕಿ ನವ್ಯ ವಂದಿಸಿದರು. ಉಪನ್ಯಾಸಕಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.



ಪ್ರತಿ ಮಗುವು ದೇವರ ವರ, ಪ್ರತಿಭೆಯನ್ನು ಪೋಷಿಸಬೇಕು..
ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಭಯ, ಹೆದರಿಕೆ ಬೇಡ. ಧೈರ್ಯವನ್ನು ಮೈಗೂಡಿಸಿಕೊಳ್ಳಿ. ನಾವು ನಿಮ್ಮೊಂದಿಗೆ ಇದ್ದೇವೆ. ವಿದ್ಯಾಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಶಿಕ್ಷಕರು, ಪೋಷಕರು ಹಾಗೂ ಆಡಳಿತ ಸಮಿತಿ ಒಟ್ಟಾಗಿ ಸಾಗಿದಾಗ ಮತ್ತು ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಿದ್ದಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಪ್ರತಿ ಮಗುವು ದೇವರ ವರ. ಆ ಮಗುವನ್ನು ನಾವು ಯಾವ ರೀತಿ ಬೆಳೆಸುತ್ತೇವೆ ಅದು ಆ ರೀತಿ ಬೆಳೆಯುತ್ತದೆ.
-ರೆ|ವಿಜಯ ಹಾರ್ವಿನ್, ಅಧ್ಯಕ್ಷರು, ಸುದಾನ ಪದವಿ ಪೂರ್ವ ಕಾಲೇಜು

LEAVE A REPLY

Please enter your comment!
Please enter your name here