ಉಪ್ಪಿನಂಗಡಿ: 32 ವರ್ಷ 11 ತಿಂಗಳು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಹಲವು ಪದೋನ್ನತಿಗಳನ್ನು ಪಡೆದು ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನಿಖಾ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರುಕ್ಮ ನಾಯ್ಕ ಇಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಕುಕ್ಕನ್ತೋಟ ನಿವಾಸಿಯಾಗಿರುವ ರುಕ್ಮ ನಾಯ್ಕ ಅವರು 19.06.1992ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಬಳಿಕ ಪದೋನ್ನತಿ ಹೊಂದಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2012ರಲ್ಲಿ ಎಎಸ್ಐ ಆಗಿ ಪದೋನ್ನತಿ ಪಡೆದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2019ರಲ್ಲಿ ಪಿಎಸ್ಐ( ಪೊಲೀಸ್ ಉಪ ನಿರೀಕ್ಷಕ)ಯಾಗಿ ಪದೋನ್ನತಿ ಹೊಂದಿದ ಇವರು ಕಡಬ, ಬೆಳ್ಳಾರೆ, ವಿಟ್ಲ ಹಾಗೂ ಉಪ್ಪಿನಂಗಡಿ ಮತ್ತು ಚುನಾವಣಾ ಸಂದರ್ಭ ಮಣಿಪಾಲ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇಲಾಖೆಯಲ್ಲಿ ತನ್ನ ಕರ್ತವ್ಯದ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆಗಳಿಲ್ಲದೆ ಕರ್ತವ್ಯ ನಿರ್ವಹಿಸಿರುವ ಇವರು, ತನ್ನ ಸೇವಾವಧಿಯಲ್ಲಿ ದನ ಕಳ್ಳತನ ಪ್ರಕರಣಗಳು, ಅಕ್ರಮ ಪಿಸ್ತೂಲ್ ಪ್ರಕರಣ ಭೇದಿಸಿದ್ದಲ್ಲದೆ, ಸುಳ್ಯಪದವಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ವಿಶೇಷ ತಂಡದೊಂದಿಗಿದ್ದು, ಈ ಪ್ರಕರಣವನ್ನು ಭೇದಿಸುವಲ್ಲಿ ಶ್ರಮಿಸಿದ್ದರು. ಅಲ್ಲದೇ, ತಾರಿಗುಡ್ಡೆ ಮುಹಮ್ಮದ್ ಅಶ್ರಫ್ ಗ್ಯಾಂಗ್ನವರ ಮೇಲೆ ಜಿಲ್ಲಾದ್ಯಂತವಿದ್ದ 20 ಪ್ರಕರಣಗಳನ್ನು ಭೇದಿಸುವಲ್ಲಿ ಶ್ರಮಿಸಿದ್ದಾರೆ. ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಹತ್ಯಾ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿಯೂ ಇವರ ಪ್ರಮುಖ ಪಾತ್ರವಿತ್ತು. ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನಿಖಾ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರುಕ್ಮ ನಾಯ್ಕ ಅವರು ಮೇ 31ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದಾರೆ.
ಪ್ರಸ್ತುತ ಕೋಡಿಂಬಾಡಿಯಲ್ಲಿ ಮನೆ ಮಾಡಿಕೊಂಡು ವಾಸ್ತವ್ಯವಿರುವ ರುಕ್ಮ ನಾಯ್ಕ ಅವರ ಪತ್ನಿ ಲಕ್ಷ್ಮೀ ಅವರು ಗೃಹಿಣಿಯಾಗಿದ್ದು, ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಪುತ್ರ ರೋಹಿತ್ ಕುಮಾರ್ ಚಿತ್ರದುರ್ಗದಲ್ಲಿ ಕೆನರಾ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಲತಾಶ್ರೀ ಹಾಗೂ ಅಳಿಯ ಬ್ರಿಜೇಶ್ ಮಂಗಳೂರಿನಲ್ಲಿ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿಗಳಾಗಿದ್ದಾರೆ.