ಪುತ್ತೂರು: 120 ಕ್ಕೂ ಹೆಚ್ಚಿನ ಕಡೆಗಳಲ್ಲಿ ಧರೆಕುಸಿತ

0

ಪರಿಹಾರ ಕೊಡಿಸುವ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗುವೆ; ಶಾಸಕ ಅಶೋಕ್ ರೈ

ಪುತ್ತೂರು: ಒಂದು ವಾರಗಳ ಕಾಲ ಸುರಿದ ಭಾರೀ ಗಾಳಿ ಮಳೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 120 ಕ್ಕೂ ಹೆಚ್ಚಿನ ಕಡೆಗಳಲ್ಲಿ ಧರೆ ಕುಸಿತವಾಗಿದ್ದು, ಇದರಿಂದ ಮನೆಗಳು, ಕೊಟ್ಟಿಗೆಗಳು ಹಾನಿಗೊಳಗಾಗಿದ್ದರೆ ಕೆಲವು ಕಡೆಗಳಲ್ಲಿ ರಸ್ತೆಗಳು ಮುಚ್ಚಲ್ಪಟ್ಟಿವೆ. ಅಪಾಯ ನಡೆದ ಸ್ತಳಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದು, ವರದಿ ಸಿದ್ದಪಡಿಸುವಂತೆ ಸೂಚನೆಯನ್ನು ನೀಡಿದ್ದೇನೆ, ಈ ಬಗ್ಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.


ದ ಕ ಜಿಲ್ಲೆ ಭೌಗೋಳಿಕವಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಗುಡ್ಡದ ಪಕ್ಕದಲ್ಲಿ ಅಥವಾ ಮನೆ ನಿರ್ಮಾಣ ಮಾಡುವ ಗುಡ್ಡವನ್ನು ಸಮತಟ್ಟು ಮಾಡಿ ಮನೆ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮನೆ ನಿರ್ಮಾಣವಾಗುವಾಗ ಅಗೆದ ಧರೆಗಳು ಮಳೆಗಾಲದಲ್ಲಿ ಕುಸಿತಕ್ಕೊಳಗಾಗುತ್ತಿದೆ. ಇದರಿಂದ ಮನೆಗಳಿಗೆ ಹಾನಿಯಾಗುತ್ತಿದೆ. ಧರೆಗಳ ಮಧ್ಯೆ ರಸ್ತೆಗಳೂ ಹಾದು ಹೋಗುವ ಕಾರಣ ಮಣ್ಣು ಕುಸಿತಕ್ಕೊಳಗಾಗಿ ರಸ್ತೆಗಳು ಮುಚ್ಚಲ್ಪಡುತ್ತಿದೆ. ಪುತ್ತೂರು ಸೇರಿದಂತೆ ಕರಾವಳಿ ಭಾಗದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚೆ ನಡೆಸಿ ಪರಿಹಾರ ಕೊಡಿಸುವಲ್ಲಿ ಮನವಿಯನ್ನು ಮಾಡುವುದಾಗಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ ವಿವಿಧ ಕಡೆಗಳಿಗೆ ಭೇಟಿ
ಭಾನುವಾರ ರಾತ್ರಿ ಧರೆ ಕುಸಿತಕ್ಕೊಳಗಾಗಿ ಹಾನಿಗೀಡಾದ ಪ್ರದೇಶಗಳಿಗೆ ಶಾಶಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರೀ ಗಾತ್ರದಲ್ಲಿ ಧರೆ ಕುಸಿತಕ್ಕೊಳಗಾದ ಬೆಳ್ಳಿಪ್ಪಾಡಿ ಗುತ್ತಿನೆ ಮನೆಗೆ ಭೇಟಿ ನೀಡಿದ ಶಾಸಕರು ಅಲ್ಲಿ ಪರಿಶೀಲನೆ ನಡೆಸಿದರು. ಉಳಿದಂತೆ ಕೋಡಿಂಬಾಡಿ ಗ್ರಾಮ ಹಾಗೂ ನೆಕ್ಕಿಲಾಡಿ ಗ್ರಾಮದ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

ಭಾರೀ ಮಳೆಗೆ ಹೆಚ್ಚಿನ ಕಡೆಗಳಲ್ಲಿ ಅನಾಹುತವಾಗಿದೆ. ಧರೆ ಕುಸಿತ, ಮನೆಗಳಿಗೆ ಹಾನಿಯಾಗಿದೆ, ಗಾಳಿಗೆ ಅಡಿಕೆ ತೋಟ ಸೇರಿದಂತೆ ಎಲ್ಲಾ ಸ್ಥರಗಳಲ್ಲೂ ಹಾನಿಯುಂಟಾಗಿದೆ. ಮನೆ ಹಾನಿಗೊಳಗಾದರೆ, ಅಡಿಕೆ ತೋಟ ನಾಶವಾದರೆ ಸರಕಾರದಿಂದ ನಿಗದಿತ ಪರಿಹಾರ ದೊರಕುತ್ತದೆ. ಉಳಿದಂತೆ ಹಾನಿಗೊಳಗಾದ ಕೆಲವು ವಿಚಾರಗಳಿಗೆ ಸರಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತಂದು , ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸಿ ಹೆಚ್ಚಿನ ಪರಿಹಾರ ಕೊಡುವಂತೆ ಕೇಳಿಕೊಳ್ಳಲಿದ್ದೇನೆ. ತುರ್ತು ವ್ಯವಸ್ಥೆಗಾಗಿ ಗ್ರಾ.ಪಂ ಗಳಿಗೆ ಈಗಾಗಲೇ ಅನುದಾನವನ್ನು ಒದಗಿಸಲಾಗಿದೆ. ಜನತೆ ಅತ್ಯಂತ ಜಾಗರೂಕರಾಗಿರಬೇಕು. ಪೃಕೃತಿಯ ಮುಂದೆ ನಾವು ಯಾರೂ ಏನೂ ಅಲ್ಲ ಎಂಬುದನ್ನು ಅರಿತುಕೊಳ್ಳುವ ಮೂಲಕ ಧರೆ ಇದ್ದ ಕಡೆಗಳಲ್ಲಿ ಅತ್ಯಂತ ಜಾಗೃತೆಯಿಂದ ಇರಬೇಕು.
ಅಶೋಕ್ ರೈ, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here