ವಿನಾಯಕನಗರ: ಭಜನಾ ಮಂದಿರ ಲೋಕಾರ್ಪಣೆ -ಧಾರ್ಮಿಕ ಸಭೆ

0


ಭಗವಂತನಿಗೆ ಬೇಕಾದ ಮಂದಿರ ನಿರ್ಮಾಣವಾಗಿದೆ – ಜಯಪ್ರಕಾಶ್‌ ರೈ
ವಿಶೇಷ ಚೈತನ್ಯ ಇರುವ ಈ ಕ್ಷೇತ್ರದಲ್ಲಿ ಭಕ್ತರಿಂದ ಮನಃಪೂರ್ವಕವಾಗಿ ಬಂದ ದೇಣಿಗೆಗೆ ಅದಕ್ಕೆ ಪೂರಕವಾಗಿ ಮಂದಿರ ನಿರ್ಮಾಣ ಮಾಡಿದ್ದೇವೆ. ಭಗವಂತನಿಗೆ ಬೇಕಾದ ಭವ್ಯ ಮಂದಿರ ನಿರ್ಮಾಣ ಮಾಡಿದ್ದೇವೆ ಎಂಬ ಭಾವನೆ ಇದೆ. ಆರ್ಥಿಕ ಸಬಲರಿಲ್ಲದ ಈ ಪರಿಸರದಲ್ಲಿ ಹೃದಯ ಶ್ರೀಮಂತಿಕೆ ಇರುವವರು ಇದ್ದಾರೆ. ಪಾಕಶಾಲೆ, ಕಚೇರಿ ನಿರ್ಮಾಣ ಕೆಲಸಗಳು ಮುಂದಿನ ದಿನಗಳಲ್ಲಿ ಜೋಡಣೆ ಮಾಡಲಿದ್ದೇವೆ.

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಪುನರ್‌ನಿರ್ಮಾಣಗೊಂಡ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಛಾಯಾಬಿಂಬ ಪ್ರತಿಷ್ಟಾ ಮಹೋತ್ಸವದ ಅಂಗವಾಗಿ ಮೇ.30 ರಂದು ಬೆಳಿಗ್ಗೆ ಧಾರ್ಮಿಕ ಸಭೆ ನಡೆಯಿತು.

ಪಾರದರ್ಶಕವಾಗಿ ಕೆಲಸ ನಡೆದಿದೆ – ಡಾ. ಸೀತಾರಾಮ ಭಟ್‌ ಕಲ್ಲಮ
ಸಭಾಧ್ಯಕ್ಷತೆಯನ್ನು ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ. ಸೀತಾರಾಮ ಭಟ್‌ ಕಲ್ಲಮ ವಹಿಸಿ ಮಾತನಾಡಿ, ʻಇಲ್ಲಿ ನಡೆದಿರುವ ಕಾರ್ಯ ಅದ್ಭುತ ಮತ್ತು ಆಶ್ಚರ್ಯಕರವಾಗಿದೆ. ಅನೇಕ ಎಡರು ತೊಡರುಗಳನ್ನು ಎದುರಿಸಿ ಹಂತಹಂತವಾಗಿ ಕೆಲಸ ಮುಂದುವರಿಸಿದ್ದೀರಿ. ಇಲ್ಲಿನ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಅತ್ಯಂತ ಪಾರದರ್ಶಕವಾಗಿ ತೋರಿಸುವ ಕೆಲಸ ನಡೆದಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಇಲ್ಲಿನ ಭಕ್ತರು ತೋರಿಸಿಕೊಟ್ಟಿದ್ದು, ಸಮಯಕ್ಕೆ ಸರಿಯಾಗಿ ಮಂದಿರ ನಿರ್ಮಾಣ ಮಾಡಿದ್ದೀರಿʼ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ರವರು  ʻಬಹಳ ಸುಂದರವಾಗಿ ಮಂದಿರ ನಿರ್ಮಾಣವಾಗಿದೆ. ದೇವರ ಕಾರ್ಯಕ್ಕೆ ಯೋಗ ಭಾಗ್ಯ ಕೂಡಿಬರಬೇಕು. ಯೋಗ ಭಾಗ್ಯಕ್ಕೆ ಭಗವಂತನ ಸಂಕಲ್ಪ ಮಾಡಿ ನಮಗೆ ಮನಸ್ಸು, ಶಕ್ತಿ ಕೊಡುತ್ತಾನೆ. ಅಂತಹ ಶಕ್ತಿ ಇಲ್ಲಿ ನಿಮ್ಮ ಮೂಲಕ ಪ್ರಕಟಗೊಂಡಿದೆ. ಆ ಮೂಲಕ ಮಂದಿರ ನಿರ್ಮಾಣಗೊಂಡಿದೆ. ಅಧ್ಯಾತ್ಮ ಶಕ್ತಿಯ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿರುವುದರಿಂದ ಹಿಂದು ಸಮಾಜದ ಪ್ರತಿಯೊಂದು ಆಚರಣೆಯೂ ಮೂಢನಂಬಿಕೆ ಅಲ್ಲ, ಅವುಗಳು ಮೂಲನಂಬಿಕೆಗಳಾಗಿವೆ. ಸ್ಪೃಶ್ಯ ಮತ್ತು ಅಸ್ಪೃಶ್ಯ ಭಾವನೆಗಳನ್ನು ಮೀರಿ ಭಗವಂತನಲ್ಲಿಗೆ ಖರ್ಚು ಇಲ್ಲದೇ ಹೋಗುವುದಿದ್ದರೆ ಅದು ಭಜನೆಯಿಂದ ಮಾತ್ರ ಸಾಧ್ಯ. ಶಸ್ತ್ರ ಮತ್ತು ಶಾಸ್ತ್ರ ಎರಡನ್ನೂ ಹೊಂದಿದ್ದರೂ, ಜಗತ್ತಿನ ಯಾವುದೇ ರಾಷ್ಟ್ರಗಳ ಅಥವಾ ಧರ್ಮ ಮೇಲೆ ಆಕ್ರಮಣ ಮಾಡದ ದೇಶವೊಂದಿದ್ದರೆ ಅದು ಭಾರತ ಮಾತ್ರ. ಆದರೆ ಆಕ್ರಮಣ ಮಾಡಿದವರಿಗೆ ಉತ್ತರ ಕೊಡುವ ಕೆಲಸ ಭಾರತದಿಂದಾಗಿದೆʼ ಎಂದರು.

ಧರ್ಮ ಉಳಿದರೆ ಮಾತ್ರ ದೇಶ ಉಳಿದೀತು – ಅರುಣ್‌ ಕುಮಾರ್‌ ಪುತ್ತಿಲ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅರುಣ್‌ ಕುಮಾರ್‌ ಪುತ್ತಿಲರವರು ಮಾತನಾಡಿ ʻಧಾರ್ಮಿಕ ಶ್ರದ್ಧೆಯನ್ನು ಮಲಿನಗೊಳಿಸುವ ನೂರಾರು ಪ್ರಕ್ರಿಯೆಗಳು, ನೋವಿನ ನಡುವೆ ಹಿಂದು ಸಮಾಜಕ್ಕೆ ಶಕ್ತಿಯನ್ನು ಕೊಡಬೇಕೆಂಬ ಯೋಚನೆಯನ್ನು ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಧರ್ಮದ ಹೆಸರಿನಲ್ಲಿ ತಾಯಂದಿರ ಸಿಂಧೂರ ಅಳಿಸಿದ ಕಹಿಘಟನೆಗಳು, ಮುಂದಿನ ದಿನಗಳಲ್ಲಿ ನಮ್ಮ ಬದುಕು ಹೇಗಿರಬೇಕೆಂಬ ಯೋಚನೆ ಮಾಡಿದೆ. ನಂಬಿಕೆಯ ಬದುಕು ಮತ್ತು ವಿಶಾಲ ಮನೋಭೂಮಿಕೆ ಇರುವ ಸಮಾಜ ನಮ್ಮದು. ಹಿಂದು ಸಮಾಜದ ಆತಂಕಗಳ ಮಧ್ಯೆ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಯೋಚನೆ ಮಾಡಬೇಕಾಗಿದೆ. ಧರ್ಮ ಉಳಿದರೆ ಮಾತ್ರ ದೇವಸ್ಥಾನ, ಮಂದಿರಗಳು ಉಳಿಯಲು ಸಾಧ್ಯʼ ಎಂದರು.


ಭವ್ಯ ಮಂದಿರ ನಿರ್ಮಾಣಗೊಂಡಿದೆ – ಬೂಡಿಯಾರು
ದಾನಿಗಳ ಸನ್ಮಾನ ನೆರವೇರಿಸಿದ ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು ಮಾತನಾಡಿ ʻಈ ಮಂದಿರ ನಿರ್ಮಾಣದ ಹಿಂದೆ ಕೈ ಜೋಡಿಸಿದವರಿಗೆ ಸಿದ್ದಿವಿನಾಯಕ ದೇವರ ಅನುಗ್ರಹ ಇದೆ. ಮಂದಿರ ನಿರ್ಮಾಣ, ಜೀರ್ಣೋದ್ಧಾರದ ಹಿಂದೆ ಅನೇಕ ಸವಾಲುಗಳಿದ್ದರೂ, ಆ ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆಸಿ, ದಾನಿಗಳ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಅದಕ್ಕಾಗಿ ತಮಗೆ ಅಭಿನಂದನೆಗಳುʼ ಎಂದರು.

ಕಾರ್ಯಕರ್ತರ ಶ್ರಮಕ್ಕೆ ಅಭಿನಂದನೆ – ರಾಧಾಕೃಷ್ಣ ಬೋರ್ಕರ್‌
ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ ʻಈ ಮಂದಿರ ನಿರ್ಮಾಣ ಮತ್ತು ಪ್ರತಿಷ್ಟಾ ಕಾರ್ಯಕ್ರಮದ ಪ್ರತಿ ಯಶಸ್ಸಿನಲ್ಲೂ ನೂರಕ್ಕಿಂತ ಮಿಕ್ಕಿ ಕಾರ್ಯಕರ್ತರ ಶ್ರಮ ಇದೆ. ಕೊನೆಯ ಕ್ಷಣದಲ್ಲಿ ನಾನು ಬಂದು ಒಂದಷ್ಟು ಯುವಕರ ಮೊಗದಲ್ಲಿದ್ದ ಹತಾಶಾ ಭಾವವನ್ನು ಹೋಗಲಾಡಿಸಿ, ಮಳೆಯ ನಡುವೆ ಅದ್ಭುತ ಕಾರ್ಯ ನಡೆಸಿದೆವು. ಯುವಕರ ಮೊಗದಲ್ಲಿ ಈಗ ಮಂದಹಾಸ ಬೀರಿದೆʼ ಎಂದರು.

ಸಂಸ್ಕೃತಿಯ ಉದ್ದೀಪನಕ್ಕೆ ಶಕ್ತಿ ತೋರಿಸೋಣ – ಜಯರಾಮ ರೈ

ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷ ಜಯರಾಮ ರೈ ನುಳಿಯಾಲು ರವರು ಮಾತನಾಡಿ ʻಹನುಮಂತ ಶಕ್ತಿಯನ್ನು ತೋರಿಸಿದ ರೀತಿಯಲ್ಲಿ ನಮ್ಮ ಸಂಸ್ಕೃತಿಯ ಉದ್ದೀಪನಕ್ಕೆ ನಾವೆಲ್ಲಾ ಶಕ್ತಿಯನ್ನು ಜಗತ್ತಿನ ಮುಂದೆ ತೋರಿಸುವ ಕೆಲಸ ಮಾಡೋಣʼ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ತಾಲೂಕು ಧಾರ್ಮಿಕ ಶಿಕ್ಷಣ ಸಮಿತಿ ಧರ್ಮಾಭ್ಯುದಯದ ಕಾರ್ಯಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಎಪಿಎಂಸಿ ಹಾಗೂ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ತ್ರಿವೇಣಿ ಪೆರ್ವೋಡಿ, ಬೆಟ್ಠಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಪ್ರಗತಿಪರ ಕೃಷಿಕರಾದ ಕುಡ್ಪಂಗೋಳಿ ಬಾಲಕೃಷ್ಣ ರೈ ನುಳಿಯಾಲು, ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್‌ ಸರಳಿಕಾನ, ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಮಾಜಿ ಅಧ್ಯಕ್ಷ ರಮಾನಾಥನ್‌ ಮಣಿಯಾಣಿ ಅಂಕತ್ತಡ್ಕ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕ ಕೆ, ಜಗನ್ನಾಥ ರೈ ಕೊಮ್ಮಂಡ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಪ್ರಕಾಶ್‌ ರೈ ಬೈಲಾಡಿ, ಪುತ್ತೂರು ವಾಣಿಯನ್‌/ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಪ್ರಸಾದ್‌ ಕಲ್ಲರ್ಪೆ, ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ಸಂಜೀವ ಗೌಡ ಪೋಳ್ಯ, ಮಂಗಳೂರು ಶ್ರೀನಿಧಿ ಕನ್‌ಸ್ಟ್ರಕ್ಷನ್‌ ಮತ್ತು ಜೆರಾಕ್ಸ್‌ ಸೆಂಟರ್‌ ಮ್ಹಾಲಕ ವಾಸಪ್ಪ ಪೂಜಾರಿ ಮಿತ್ತಡ್ಕ, ಮಂಗಳೂರು ನಿಟ್ಟೆ ವಿದ್ಯಾಸಂಸ್ಥೆ ಉಪನ್ಯಾಸಕಿ ವಿಸ್ಮಿತಾ ಶೆಟ್ಟಿ ಕೆ., ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ಗಣೇಶ್‌ ಎಂ. ಮೂಲೆಗದ್ದೆ ಪೆರ್ಲಂಪಾಡಿ, ಮಂಗಳೂರಿನ ಸಖಿಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ  ಆಡಳಿತಾಧಿಕಾರಿ ಪ್ರಿಯಾ ರಾಜಮೋಹನ್‌, ಕಾಡುಮಠ ಶ್ರೀರಾಮ ಸೇವಾ ಟ್ರಸ್ಟ್‌ ಕೋಶಾಧಿಕಾರಿ ಗಣೇಶ್‌ ಶೆಟ್ಟಿ ಕೆದುಮೂಲೆ ಭಾಗವಹಿಸಿ ಶುಭ ಹಾರೈಸಿದರು.

ಜಯಪ್ರಕಾಶ್‌ ರೈ ಚೆಲ್ಯಡ್ಕರವರಿಗೆ ಸನ್ಮಾನ

ಇದೇ ವೇಳೆ ಭಜನಾ ಮಂದಿರ ಪುನರ್‌ನಿರ್ಮಾಣ ಸಮಿತಿಯ ಅಧ್ಯಕ್ಷನಾಗಿದ್ದುಕೊಂಡು, ಅಭೂತಪೂರ್ವವಾಗಿ ಸಂಘಟಿಸಿ ಯಶಸ್ವಿಯಾಗಿ ಮಂದಿರ ನಿರ್ಮಾಣ ಮತ್ತು ಪ್ರತಿಷ್ಟಾ ಮಹೋತ್ಸವ ನೆರವೇರಿಸಿದ ಜಯಪ್ರಕಾಶ್‌ ರೈ ಚೆಲ್ಯಡ್ಕ ಹಾಗೂ ಅಹಲ್ಯ ರೈ ದಂಪತಿಯನ್ನು ಶ್ರೀ ಸಿದ್ದಿ ವಿನಾಯಕ ಸೇವಾ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಾಶ್ವತ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ
ಮಂದಿರ ನಿರ್ಮಾಣಕ್ಕೆ ೫ ಸೆಂಟ್ಸ್‌ ಜಾಗ ಉದಾರವಾಗಿ ನೀಡಿದ ದಯಾನಂದ ವಿನಾಯಕನಗರ, ದಿ. ಸುಬ್ಬಣ್ಣ ನಾಯ್ಕ ಸ್ಮರಣಾರ್ಥ 1 ಲಕ್ಷ ರೂ. ದತ್ತಿನಿಧಿ ಸ್ಥಾಪಿಸಿದ ಬಾಲಕೃಷ್ಣ ನಾಯ್ಕ್‌ ಕಕ್ಕೂರು, ಮಂದಿರಕ್ಕೆ ಬೋರ್‌ವೆಲ್‌ ಕೊಡುಗೆ ನೀಡಿದ ಶ್ರೀಕುಮಾರ್‌ ಅಡ್ಯೆತ್ತಿಮಾರು, ಬೋರ್‌ವೆಲ್‌ಗೆ ಪಂಪ್‌ಸೆಟ್‌ ಕೊಡುಗೆಯಾಗಿ ನೀಡಿದ ಉದಯ ಕುಮಾರ್‌ ಅರಂಬ್ಯ, ಗರ್ಭಗೃಹ ಮೆಟ್ಟಿಲು ವಿನ್ಯಾಸ ಸೇವೆಗೈದ ವಿಶ್ವನಾಥ ಪೂಜಾರಿ ನರ್ಕಳ, ಇಲೆಕ್ಟ್ರಿಕಲ್‌ ಕೆಲಸ ಉಚಿತವಾಗಿ ಮಾಡಿದ ಈಶ ಇಲೆಕ್ಟ್ರಿಕಲ್ಸ್‌ ಮತ್ತು ಪ್ಲಂಬಿಂಗ್‌ ವರ್ಕ್ಸ್‌ನ ಯತೀಶ್‌ ಕೋರ್ಮಂಡ, ಮರಮುಟ್ಟುಗಳನ್ನು ನೀಡಿದ ಅಪ್ಪಣ್ಣ ನಾಯ್ಕ್‌ ಕಟೀಲ್ತಡ್ಕ, ಸುಂದರ್‌ ನಾಯಕ್‌ ಬಾಳೆಗುಳಿ ರವರಿಗೆ ಸನ್ಮಾನ ಗೌರವಾರ್ಪಣೆ ನಡೆಯಿತು.

ದೇಣಿಗೆ ಮತ್ತು ಮರಮುಟ್ಟುಗಳನ್ನು ನೀಡಿದ ಡಾ. ಸೀತಾರಾಮ ಭಟ್‌ ಕಲ್ಲಮ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಸಾಂತಪ್ಪ ಗೌಡ ಪಂಬೆಜಾಲು, ಚಂದ್ರಶೇಖರ ಭಟ್‌ ಕೋಡಿ, ವಾಸಪ್ಪ ಪೂಜಾರಿ ಮಿತ್ತಡ್ಕ, ಜಯರಾಮ ಗಾಂಭೀರ ಮಡ್ಯಂಪಾಡಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ರೂಪುರೇಷೆಯಲ್ಲಿ ಮಾರ್ಗದರ್ಶನ ಮಾಡಿದ ರಾಧಾಕೃಷ್ಣ ಬೋರ್ಕರ್‌ ಕತ್ತಲೆಕಾನರವರನ್ನು ಇದೇ ವೇಳೆ ಗೌರವಿಸಲಾಯಿತು.

ಪುನರ್‌ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್‌ ರೈ ಚೆಲ್ಯಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ ಮಂದಿರ ಬೆಳೆದು ಬಂದ ಬಗ್ಗೆ ಮತ್ತು ಪುನರ್‌ನಿರ್ಮಾಣ ಸಮಿತಿಯ ಮುಖಾಂತರ ರೂಪಿಸಿದ ಕಾರ್ಯ ಯೋಜನೆಗಳ ಬಗ್ಗೆ ಮಾತನಾಡಿದರು. ಕು. ನವ್ಯಶ್ರೀ ಪ್ರಾರ್ಥಿಸಿದರು. ಉಮೇಶ್‌ ಮಿತ್ತಡ್ಕ ಸ್ವಾಗತಿಸಿ, ಪುನರ್‌ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ವಂದಿಸಿದರು. ಸಭಾ ಕಾರ್ಯಕ್ರ ನಿರ್ವಹಣಾ ಸಮಿತಿ ಸಂಚಾಲಕ ಶಿವಪ್ರಸಾದ್‌ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಶ್ರೀಕುಮಾರ್‌ ಅಡ್ಯತ್ತಿಮಾರು, ಕಾರ್ಯದರ್ಶಿ ಗಣೇಶ್‌ ಪಂಬೆಜಾಲು ಅತಿಥಿಗಳನ್ನು ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ ಕೇಸರಿ ಕಲಾ ತಂಡ ಕೇಸರಿನಗರ ಮಿತ್ತಡ್ಕ ಇದರ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ʻಶ್ರೀದೇವಿ ಶಾಂಭವಿʼ ಯಕ್ಷಗಾನ ತಾಳಮದ್ದಳೆ ಜರಗಿತು. ರಾತ್ರಿ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ರವರ ʻಛತ್ರಪತಿ ಶಿವಾಜಿʼ ಚಾರಿತ್ರಿಕ ನಾಟಕ ಪ್ರದರ್ಶನಗೊಂಡಿತು. ಇದೇ ವೇಳೆ ʻಧರ್ಮ ಚಾವಡಿʼ ಸಿನಿಮಾ ತಂಡದಿಂದ ಪ್ರಮೋಷನ್‌ ನಡೆಯಿತು. ಚಿತ್ರನಟ ರಮೇಶ್‌ ರೈ ಕುಕ್ಕುವಳ್ಳಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ನಿತಿನ್‌ ರೈ ಕುಕ್ಕುವಳ್ಳಿ ಮತ್ತು ತಂಡ ಚಿತ್ರದ ಬಗ್ಗೆ ಮಾತನಾಡಿದರು.

LEAVE A REPLY

Please enter your comment!
Please enter your name here