ವಿಶ್ವ ಪರಿಸರ ದಿನದ ಹೆಸರಲ್ಲಿ ಗಿಡ ನೆಡುವುದಕ್ಕಿಂತ ನೆಟ್ಟ ಗಿಡವನ್ನು ಮರವಾಗಿ ಬೆಳೆಸುವುದು ಮುಖ್ಯ: ಗೋಕುಲ್ನಾಥ್ ಪಿ.ವಿ
ಪುತ್ತೂರು: ಪುತ್ತೂರಿನ ಹೃದಯ ಭಾಗದ ಶ್ರೀ ಧರ್ಮಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5 ರಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಗೋಕುಲ್ನಾಥ್ ಪಿ.ವಿ, ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ವಿಶ್ವ ಪರಿಸರ ದಿನದ ಹೆಸರಿನಲ್ಲಿ ಗಿಡ ನೆಡುವುದಕ್ಕಿಂತ ನೆಟ್ಟ ಗಿಡವನ್ನು ಮರವಾಗಿ ಬೆಳೆಸುವುದು ಆದ್ಯ ಕರ್ತವ್ಯವಾಗಿರಲಿ. ನಿಸರ್ಗದತ್ತ ಹಣ್ಣು, ಕಾಯಿ ಬೀಜಗಳ ಹಕ್ಕುದಾರರು ನಾವಲ್ಲ. ಹಕ್ಕಿಗಳು, ಕೋತಿಗಳು, ಆನೆಗಳಂತಹ ಸಸ್ಯಹಾರಿ ಜೀವಿಗಳಿಗೆ ಅದರ ಹಕ್ಕನ್ನು ಬಿಟ್ಟುಬಿಡೋಣ ಎಂದು ಅವರು ಕರೆ ನೀಡಿದರು.
ಲೆಕ್ಕಶಾಸ್ತ್ರ ಉಪನ್ಯಾಸಕಿ ಮಾಧವಿ, ಪರಿಸರ ನಾಶಕ್ಕೆ ಕಾರಣವಾದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಉಪನ್ಯಾಸಕರಾದ ರಾನೀಹ, ಮೇಘ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ RCB ತಂಡದ ಸಂಭ್ರಮಾಚಾರಣೆಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ನಿಧನರಾದವರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ಮುಖ್ಯಶಿಕ್ಷಕಿ ಪ್ರಮೀಳಾ ಎನ್.ಡಿ ಕಾರ್ಯಕ್ರಮ ನಿರೂಪಿಸಿದರು.