ಪುಚ್ಚೇರಿ ಶಾಲಾ ನಿವೃತ್ತ ಮುಖ್ಯಶಿಕ್ಷಕ ಪದ್ಮನಾಭರವರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ಪುಚ್ಚೇರಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 24 ವರ್ಷ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ಮೇ.31ರಂದು ನಿವೃತ್ತರಾದ ಪದ್ಮನಾಭ ಪಿ.ಇವರಿಗೆ ಬೀಳ್ಕೊಡುಗೆ ಸಮಾರಂಭ ಶಾಲಾ ಪೂರ್ವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಮತ್ತು ಊರವರ ಸಹಕಾರದೊಂದಿಗೆ ಜೂ.7ರಂದು ಶಾಲಾ ರಂಗಮಂದಿರದಲ್ಲಿ ನಡೆಯಿತು.


ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಡಬ ತಾಲೂಕು ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅವರು ಮಾತನಾಡಿ, 40 ವರ್ಷದ ಸೇವಾ ಅವಧಿಯಲ್ಲಿ 24 ವರ್ಷ ಒಂದೇ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಎಲೆಮರೆಯ ಕಾಯಿಯಂತೆ ಪದ್ಮನಾಭ ಅವರು ಪರಿಪೂರ್ಣವಾದ ಸೇವೆ ಸಲ್ಲಿಸಿದ್ದಾರೆ. ಅವರ ಈ ಸೇವೆ ಗುರುತಿಸಿ ಊರಿನವರೆಲ್ಲರೂ ಸೇರಿಕೊಂಡು ಸನ್ಮಾನಿಸುತ್ತಿರುವುದು ಜೀವಮಾನದಲ್ಲಿ ಅವರಿಗೆ ದೊರೆತ ದೊಡ್ಡ ಉಡುಗೊರೆಯಾಗಿದೆ. ಪದ್ಮನಾಭ ಅವರು ಈ ಊರಿನ ಜನರ ಪ್ರೀತಿ ಸಂಪಾದಿಸಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.


ಇನ್ನೋರ್ವ ಅತಿಥಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್ ಕುಮಾರ್ ನೆಲ್ಯಾಡಿ ಮಾತನಾಡಿ, ಶಿಕ್ಷಕರಾಗಿ 40 ವರ್ಷ ಸೇವೆ ಸಲ್ಲಿಸಿರುವ ಪದ್ಮನಾಭ ಅವರು ಜಿಲ್ಲೆ, ರಾಜ್ಯ ಮಟ್ಟದ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಆದರೆ ಅವರು ಎಂದಿಗೂ ಪ್ರಶಸ್ತಿಯ ಹಿಂದೆ ಹೋಗಿಲ್ಲ. ಈಗ ಊರಿನವರೆಲ್ಲರೂ ಸೇರಿಕೊಂಡು ಗೌರವಿಸುತ್ತಿರುವುದು ಅವರಿಗೆ ದೊರೆತ ದೊಡ್ಡ ಪ್ರಶಸ್ತಿಯಾಗಿದೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.


ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಮಾತನಾಡಿ, ತನ್ನ 40 ವರ್ಷಗಳ ಸೇವೆಯಲ್ಲಿ ಪದ್ಮನಾಭ ಪಿ.ಅವರು 24 ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಈ ಶಾಲೆಯ ಅಭಿವೃದ್ಧಿಗೂ ಕಾರಣಕರ್ತರಾಗಿದ್ದಾರೆ. ಉತ್ತಮ ಕುಟುಂಬದ ಹಿನ್ನೆಲೆ ಹೊಂದಿರುವ ಪದ್ಮನಾಭ ಅವರು, ತನ್ನ ಸೇವೆಯನ್ನು ಉತ್ತಮ ರೀತಿಯಲ್ಲಿ ಪೂರೈಸಿದ್ದಾರೆ. ಅವರ ಮುಂದಿನ ಭವಿಷ್ಯವು ಉತ್ತಮವಾಗಲಿ ಎಂದರು.


ಬೀಳ್ಕೊಡುಗೆ ಸಮಾರಂಭ ಸಮಿತಿ ಅಧ್ಯಕ್ಷ ಅಜಿತ್ ಕಜೆ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಿಲವೂರು ದೀಪ ಪ್ರಜ್ವಲಿಸಿದರು. ನೆಲ್ಯಾಡಿ ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಪಿ., ಹಿರಿಯ ವಿದ್ಯಾರ್ಥಿ, ಮಂಗಳೂರಿನ ಉದ್ಯಮಿ ಚೇತನ್‌ಕುಮಾರ್ ಮಾಪಾಲ, ಪ್ರಗತಿಬಂಧು ಸ್ವಸಹಾಯ ಸಂಘಗಳ ಮಾದೇರಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿನ್ ಪಿ.ಜೆ., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ, ನೆಲ್ಯಾಡಿ ಗ್ರಾ.ಪಂ.ಸದಸ್ಯರೂ ಆದ ಆನಂದ ಪಿಲವೂರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ವಿದ್ಯಾರ್ಥಿನಿಯರಾದ ಜನನಿ ಡಿ., ಧನ್ಯಶ್ರೀ, ಕುಷಿ ಎಂ.ಆರ್.ಅನಿಸಿಕೆ ವ್ಯಕ್ತಪಡಿಸಿದರು.

ಸಹಕರಿಸಿದವರಿಗೆ ಕೃತಜ್ಞತೆ:
ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯಶಿಕ್ಷಕ ಪದ್ಮನಾಭ ಪಿ.,ಅವರು ಮಾತನಾಡಿ, 2021ರ ಆಗಸ್ಟ್ ತಿಂಗಳಿನಿಂದ ಆರಂಭಗೊಂಡು 24 ವರ್ಷ ಇಲ್ಲಿ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಪೂರ್ವಜನ್ಮದ ಪುಣ್ಯದ ಫಲವಾಗಿ ಈ ಶಾಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿತ್ತು. ಊರಿನವರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಿದ್ದಾರೆ. ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಚೇತನ, ಶ್ರೀಲತಾ ಸಿ.ಹೆಚ್., ಜಯಂತಿ, ಕೊಪ್ಪ ಕುಂಬಾರರ ಸೇವಾ ಸಂಘದ ಅಧ್ಯಕ್ಷ ವೆಂಕಪ್ಪ ಕುಂಬಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ ಪಿ., ಮಾಜಿ ಅಧ್ಯಕ್ಷರಾದ ಗಣೇಶ್ ಪಿ., ಲೋಕಯ್ಯ ಗೌಡ ಪಿಲವೂರು, ಕಮಲಾಕ್ಷ ಬರಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯಶಿಕ್ಷಕ ಪುರಂದರ ಗೌಡ ಡೆಂಜ ಸ್ವಾಗತಿಸಿದರು. ಹಳೆವಿದ್ಯಾರ್ಥಿನಿ ರಮ್ಯಶ್ರೀ ಕೊರಡೇಲು ವಂದಿಸಿದರು. ಶಿಕ್ಷಕಿ ಸುಕನ್ಯ ಕುಡ್ತಾಜೆ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆರಂಭದಲ್ಲಿ ಚೆಂಡೆಯೊಂದಿಗೆ ಪದ್ಮನಾಭ ಪಿ.ಅವರನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಯಿತು.

ಸನ್ಮಾನ, ಗೌರವಾರ್ಪಣೆ;
ನಿವೃತ್ತ ಮುಖ್ಯಶಿಕ್ಷಕ ಪದ್ಮನಾಭ ಪಿ. ಹಾಗೂ ಅವರ ಪತ್ನಿ ನೂಜಿಬಾಳ್ತಿಲ ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಸುಂದರಿ ಅವರ ಜೊತೆಯಾಗಿ ಶಾಲಾ ಪೂರ್ವ ವಿದ್ಯಾರ್ಥಿ ಸಂಘ ಹಾಗೂ ಊರಿನವರ ವತಿಯಿಂದ ಮೈಸೂರು ಪೇಟ, ಶಾಲು, ಹಾರ, ಫಲತಾಂಬೂಲ, ಚಿನ್ನದ ಬ್ರೇಸ್‌ಲೈಟ್ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ಉಪನ್ಯಾಸಕಿಯಾಗಿರುವ ವಸಂತಿವಿನಯ ಸನ್ಮಾನ ಪತ್ರ ವಾಚಿಸಿದರು. ಎಸ್‌ಡಿಎಂಸಿ, ಶಾಲಾವಿದ್ಯಾರ್ಥಿಗಳು, ಶಿಕ್ಷಕರು, ಅಕ್ಷರದಾಸೋಹ ಸಿಬ್ಬಂದಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದೇರಿ ಒಕ್ಕೂಟದಿಂದ, ಸ್ಥಳೀಯ ಶಾಲೆಗಳ ಶಿಕ್ಷಕರ ಸಹಿತ ಹಲವು ಮಂದಿ ಪದ್ಮನಾಭ ಪಿ.ಅವರನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ನಿವೃತ್ತ ಶಿಕ್ಷಕ ಪದ್ಮನಾಭ ಪಿ.ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ನಿವೃತ್ತ ಶಿಕ್ಷಕಿ ಜಯಂತಿಯವರಿಗೆ ಸನ್ಮಾನ:
ಪುಚ್ಚೇರಿ ಶಾಲೆಯಲ್ಲಿ 10 ವರ್ಷ ಸೇವೆ ಸಲ್ಲಿಸಿ ನೆಲ್ಯಾಡಿ ಪಿಎಂಶ್ರೀ ಸರಕಾರಿ ಉ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಕಳೆದ ಎಪ್ರಿಲ್ ತಿಂಗಳಿನಲ್ಲಿ ನಿವೃತ್ತರಾದ ಜಯಂತಿ ಎಸ್.,ಹಾಗೂ ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹಳೆವಿದ್ಯಾರ್ಥಿ ತೀರ್ಥೇಶ್ವರ ಉರ್ಮಾನು ಸನ್ಮಾನ ಪತ್ರ ವಾಚಿಸಿದರು.

LEAVE A REPLY

Please enter your comment!
Please enter your name here