ಅಂಗನವಾಡಿಯಲ್ಲಿ ಜೀವನ ಮೌಲ್ಯಗಳನ್ನು ಕಲಿಸುವ ಕೆಲಸ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ಅಂಗನವಾಡಿ ಶಿಕ್ಷಣವೆನ್ನುವುದು ಮಕ್ಕಳ ಭವಿಷ್ಯದ ತಳಪಾಯವಾಗಿದ್ದು, ಇಲ್ಲಿಯ ಕಾರ್ಯಕರ್ತೆಯರು ಮಕ್ಕಳಿಗೆ ತಾಯಿ ಇದ್ದಂತೆ. ಶಿಸ್ತು, ಆಚಾರ, ವಿಚಾರ ಸೇರಿದಂತೆ ಜೀವನ ಮೌಲ್ಯಗಳನ್ನು ಕಲಿಸುವ ಕೆಲಸವು ಅಂಗನವಾಡಿಯಲ್ಲಿ ನಡೆಯುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.
ತಾಲೂಕು ಪಂಚಾಯತ್ ಅನಿರ್ಬಂಧಿತ ಅನುದಾನ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಒಗ್ಗೂಡಿಸುವಿಕೆ ಅನುದಾನದಲ್ಲಿ ನಿರ್ಮಿಸುವ ಪಾಲೆತ್ತಡಿ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಅಂಗನವಾಡಿ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಮಕ್ಕಳಿಗೇ ಮಾತ್ರ ಅಂಗನವಾಡಿ ಸೀಮಿತವಾಗಿರದೇ ಅಂಗನವಾಡಿಗಳಲ್ಲಿ ಗರ್ಭೀಣಿಯರಿಗೆ ಉತ್ತಮ ಪೌಷ್ಟಿಕ ಆಹಾರ ನೀಡುವ ಕೆಲಸವೂ ನಡೆಯುತ್ತಿದೆ ಎಂದ ಅವರು, ಉದ್ಯಮಗಳು ಊರಿಗೆ ಕಾಲಿಟ್ಟರೆ ಊರಿನ ಅಭಿವೃದ್ಧಿ ಸಾಧ್ಯವಾಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ. ಆದ್ದರಿಂದ ಇದರ ಬಗ್ಗೆಯೂ ನಾನು ಒತ್ತು ನೀಡುತ್ತಿದ್ದು, ಅಭಿವೃದ್ಧಿಯಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಜನರು ನಮ್ಮನ್ನು ಆಯ್ಕೆ ಮಾಡುವುದು ಕಾಂಗ್ರೆಸ್- ಬಿಜೆಪಿ ಎಂದು ರಾಜಕೀಯ ಮಾಡಲು ಅಲ್ಲ. ಊರಿನ ಅಭಿವೃದ್ಧಿ ಮಾಡಲು. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಲು. ಆ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಅಕ್ರಮ- ಸಕ್ರಮ, ೯೪ಸಿ ಸೇರಿದಂತೆ ಪಕ್ಷ, ಜಾತಿ, ಧರ್ಮ ನೋಡದೇ ಓರ್ವ ಶಾಸಕನಾಗಿ ಎಲ್ಲರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ದಂತ ವೈದ್ಯ ಡಾ. ರಾಜಾರಾಮ ಕೆ.ಬಿ. ಮಾತನಾಡಿ, ಮಕ್ಕಳಿಗೆ ಮನೆಯ ವಾತಾವರಣದಲ್ಲಿ ಪೌಷ್ಠಿಕ ಆಹಾರದೊಂದಿಗೆ ಸಂಸ್ಕಾರ ಶಿಕ್ಷಣವನ್ನು ಒದಗಿಸಲು ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಅನಿತಾ, ಮೇಲ್ವಿಚಾರಕಿ ಶ್ರೀಮತಿ ನಂದನ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಲಕ್ಷ್ಮೀಶ, ಗೀತಾ ದಾಸರಮೂಲೆ, ಸವಿತಾ, ಭವಾನಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬೇಬಿ, ಗ್ರಾ.ಪಂ. ಕಾರ್ಯದರ್ಶಿ ಸತೀಶ್ ಬಂಗೇರ, ಪ್ರಮುಖರಾದ ರವೀಂದ್ರ ಪಟಾರ್ತಿ, ವೆಂಕಪ್ಪ ಪೂಜಾರಿ, ನಿತ್ಯಾನಂದ ಶೆಟ್ಟಿ, ಪ್ರಸಾದ್ ಉಪಸ್ಥಿತರಿದ್ದರು.