ಉಪ್ಪಿನಂಗಡಿ: ದೇವಾಲಯದಲ್ಲಿ ಶ್ರೀ ದೇವರಿಗೆ ಪರಿಶುದ್ಧ ಎಳ್ಳೆಣ್ಣೆಯನ್ನು ಸಮರ್ಪಿಸಲು ಅವಕಾಶ ಒದಗಿಸುವ ಸಲುವಾಗಿ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿಯೇ ಪರಿಶುದ್ಧ ಎಳ್ಳೆಣ್ಣೆಯ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ ಹೇಳಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಪರಿಶುದ್ಧ ಎಳ್ಳೆಣ್ಣೆ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣಕಾಶಿ, ಮೋಕ್ಷದಾಯಕ ಕ್ಷೇತ್ರವೆಂದೆ ಹೆಸರುವಾಸಿಯಾದ ಇಲ್ಲಿಗೆ ರಾಜ್ಯ ಹೊರರಾಜ್ಯದ ಭಕ್ತರು ಬರುತ್ತಿದ್ದು, ಭಕ್ತರು ಶ್ರೀ ದೇವರಿಗೆ ಕಲುಷಿತ ಎಳ್ಳೆಣ್ಣೆ ಸಮರ್ಪಿಸಲು ಇಚ್ಚಿಸದೆ ಪರಿಶುದ್ಧ ಎಳ್ಳೆಣ್ಣೆಗಾಗಿ ಹಂಬಲಿಸುತ್ತಿದ್ದ ಕಾರಣಕ್ಕೆ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ದೇವಾಲಯಗಳಿಗೆ ಬರುವ ಭಕ್ತರ ಅನುಕೂಲತೆಗೆ ಅನುಗುಣವಾಗಿ ಎಲ್ಲಾ ವ್ಯವಸ್ಥೆಯನ್ನು ಹಂತ ಹಂತವಾಗಿ ಆದ್ಯತೆಯ ಮೇರೆಗೆ ಕಲ್ಪಿಸಲು ಬದ್ಧವಾಗಿರಬೇಕೆಂದರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಿ. ಕೃಷ್ಣ ರಾವ್ ಆರ್ತಿಲ, ಡಾ. ರಮ್ಯ ರಾಜಾರಾಮ್ , ಸೋಮನಾಥ, ಅನಿತಾ ಕೇಶವ ಗೌಡ, ಬಿ. ಗೋಪಾಲಕೃಷ್ಣ ರೈ, ದೇವಿದಾಸ ರೈ, ಎಂ. ವೆಂಕಪ್ಪ ಪೂಜಾರಿ, ಪ್ರಧಾನ ಅರ್ಚಕ ಹರೀಶ ಉಪಾಧ್ಯಾಯ , ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ವಿನಯ ಸುವರ್ಣ ಪ್ರಮುಖರಾದ ಗೋಪಾಲ ಪೂಜಾರಿ, ಮೋಹನ ಕಬಕ, ವಿಶ್ವನಾಥ ರೈ, ದೇವಳದ ಸಿಬ್ಬಂದಿ ದಿವಾಕರ ಗೌಡ, ಪದ್ಮನಾಭ ಕುಲಾಲ್, ಕೃಷ್ಣ ಪ್ರಸಾದ್ ದೇವಾಡಿಗ ಉಪಸ್ಥಿತರಿದ್ದರು.